Sunday, July 30, 2023

ಕಲಿಕಾ ಮಾಧ್ಯಮವಾಗಿ ಕನ್ನಡ

ಕಲಿಕೆಯಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸುವ ವಿಚಾರ ಆಗಿಂದಾಗ್ಗೆ ಸಾರ್ವಜನಿಕ ಚರ್ಚೆಗೆ ಬರುತ್ತಲೇ ಇರುತ್ತದೆ. ಇದೀಗ ಗ್ರಾಮ ಪಂಚಾಯತಿಗೊಂದು ಇಂಗ್ಲಿಷ್ ಶಾಲೆಯನ್ನು ಆರಂಭಿಸಬೇಕು ಎಂದು ಶಾಸಕರೊಬ್ಬರು ಸರ್ಕಾರವನ್ನು ಒತ್ತಾಯಿಸಿದ ಸುದ್ದಿಯ ಹಿನ್ನೆಲೆಯಲ್ಲಿ ಪ್ರಜಾವಾಣಿಯಲ್ಲಿ ವಸಂತ ಶೆಟ್ಟಿಯವರ "ಕಲಿಕೆಯಲ್ಲಿ ಕನ್ನಡ ಮಾಧ್ಯಮದ ಮರುಹುಟ್ಟಿಗೆ ಏನು ಬೇಕು?" ಎಂಬ ಹೆಸರಿನ ಲೇಖನವನ್ನು ನೋಡಿದೆ. 

ಭಾಷೆಯ ಪ್ರಶ್ನೆ ಬಂದಾಗ ಶಾಂತವಾಗಿ, ನಿರ್ಭಾವುಕವಾಗಿ ವಿಚಾರ ಮಾಡುವುದು ಕಷ್ಟ. ಕಲಿಕಾ ಮಾಧ್ಯಮದ ವಿಷಯದಲ್ಲೂ ಅದೇ ಆಗಿರುವುದು. ಸುಮಾರು ಹತ್ತು ವರ್ಷಗಳ ಹಿಂದೆ ಸುಪ್ರೀಂ ಕೋರ್ಟಿನ ತೀರ್ಪು ಬಂದ ಸಂದರ್ಭದಲ್ಲಿ ಕಲಿಕಾ ಮಾಧ್ಯಮದ ಕುರಿತು ಸುದ್ದಿ ಮಾಧ್ಯಮಗಳಲ್ಲಿ ಚರ್ಚೆಗಳಾಗಿದ್ದವು. 

ಪ್ರಜಾವಾಣಿಯಲ್ಲಿ ಪದ್ಮರಾಜ ದಂಡಾವತಿಯವರು "ಕನ್ನಡ ಪ್ರೇಮ: ಭ್ರಮೆ ಮತ್ತು ವಾಸ್ತವ" ಎಂಬ ತಮ್ಮ ಲೇಖನದಲ್ಲಿ ಕನ್ನಡ ಭಾಷೆ ಅನ್ನದ ಭಾಷೆ ಅನಿಸದೇ  ಇದ್ದ ಕಾರಣಕ್ಕೆ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸಿ ಬಂದ  ಬಗ್ಗೆ ಬರೆದಿದ್ದರು. ನಮ್ಮಂತವರಿಗೇ ಕನ್ನಡ ಅನ್ನದ ಭಾಷೆ ಅನಿಸದೇ ಇದ್ದರೆ  ಮನೆ ಕೆಲಸಕ್ಕೆ ಬರುವ ಹೆಂಗಸಿಗೆ, ತರಕಾರಿ ಮಾರುವ ಗಂಡಸಿಗೆ ಏಕೆ ಅನಿಸಬೇಕು? ಎಂಬ ಪ್ರಶ್ನೆಯನ್ನೆತ್ತಿದ್ದರು. 

ಸುಪ್ರೀಂ ಕೋರ್ಟಿನ ಸಂವಿಧಾನ ಪೀಠದ ತೀರ್ಪಿನ  ನಂತರ ಕಡ್ಡಾಯ ಕನ್ನಡ ಮಾಧ್ಯಮದ ಮರುಹುಟ್ಟು ಅಸಂಭವನೀಯವಾಗಿ ಕಾಣುತ್ತಿದೆ. ಕನ್ನಡ ಮಾಧ್ಯಮದ ಪ್ರಯೋಜನಗಳ ಬಗ್ಗೆ ಬರೆಯುತ್ತ "ಪದ ಸಂಪತ್ತಿನ ಬುನಾದಿಯ ಮೇಲೆ ಹೊಸ ವಿಷಯಗಳನ್ನು ಕಲಿಸುತ್ತ  ಹೋಗುವುದು, ಮಗುವಿನ ಬೌದ್ಧಿಕ ವಿಕಾಸ, ಮಕ್ಕಳಲ್ಲಿ  ಸಮಸ್ಯೆ ಬಗೆಹರಿಸುವ ಕಲೆ, ವಸ್ತುನಿಷ್ಠವಾಗಿ ಯೋಚಿಸುವ ಶಕ್ತಿ  ಪಡೆಯುವ ಪರಿಣಾಮಕಾರಿ ಮಾರ್ಗ" ಇತ್ಯಾದಿಗಳನ್ನು ವಸಂತ ಶೆಟ್ಟಿಯವರು ಪಟ್ಟಿ ಮಾಡಿದ್ದಾರೆ. ಹಾಗೂ "ಸಮಾನತೆಯ ನೆಲೆಯ ಶಿಕ್ಷಣವನ್ನು ಸಾಧ್ಯವಾಗಿಸುವ ಏಕೈಕ  ಸಾಧನ" ವಾಗಿಯೂ ಕನ್ನಡ ಮಾಧ್ಯಮವನ್ನು ಕಾಣುವ ಅಗತ್ಯವನ್ನು ಲೇಖಕರು ವಿವರಿಸುತ್ತಾರೆ. ಪಶ್ಚಿಮದ ಎಲ್ಲ ಮುಂದುವರಿದ ದೇಶಗಳಿಗೂ ಕಲಿಕೆಯಲ್ಲಿ ಯಾವ ನುಡಿಯಿರಬೇಕು ಅನ್ನುವ ಪ್ರಶ್ನೆ ಎಂದೋ ಬಗೆಹರಿದಿದೆಯೆಂದು ಬರೆಯುತ್ತಾರೆ. 

ಭಾಷೆಗೆ ಸಂಬಂಧಪಟ್ಟಂತೆ ಅಲ್ಲಿಯೂ ಕಾಲಕಾಲಕ್ಕೆ ಚರ್ಚೆಗಳು ನಡೆಯುತ್ತಿರುತ್ತವೆ. ಈಗ ಐದಾರು ವರ್ಷಗಳ ಹಿಂದೆ ಚಾರ್ಲ್ಸ್ ಟೇಲರ್ ಎಂಬ ಕೆನಡಾದ ಫಿಲಾಸಫಿ ಪ್ರೊಫೆಸರ್ ಒಬ್ಬರು ಪ್ರಕಟಿಸಿದ್ದ The Language Animal : The  Full Shape of the Human Linguistic Capacity (ದಿ ಲ್ಯಾಂಗ್ವೇಜ್ ಅನಿಮಲ್)  ಎಂಬ ಪುಸ್ತಕದಲ್ಲಿ ಕಳೆದ ಒಂದು ಶತಮಾನದಲ್ಲಿ ಭಾಷೆಯ ಕುರಿತು ದಾರ್ಶನಿಕ ಆಸಕ್ತಿ ಒಂದು ಗೀಳಿನಷ್ಟು ತೀವ್ರವಾಗಿ ಬೆಳೆದಿರುವುದನ್ನು ಪ್ರಸ್ತಾಪಿಸುತ್ತಾರೆ. 

ಹೇಗೆ ಭಾಷೆಯನ್ನು ಎರಡು ವಿಭಿನ್ನ ಬಗೆಯಲ್ಲಿ ವ್ಯಾಖ್ಯಾನಿಸಲಾಗುತ್ತದೆ ಎಂಬುದು ಈ ಪುಸ್ತಕದುದ್ದಕ್ಕೂ ಪ್ರಸ್ತಾಪವಾಗುತ್ತದೆ. ಕೇವಲ ಮಾಹಿತಿಯನ್ನು ಕಲೆ ಹಾಕುವ ಮತ್ತು ಸಂವಹನಗೊಳಿಸುವ ಸಾಧನವಾಗಿ ನೋಡುವುದು ಒಂದು ರೀತಿಯಾದರೆ , "ನನ್ನ ಭಾಷೆಯ ಮಿತಿಯೇ ನನ್ನ ಪ್ರಪಂಚದ ಮಿತಿಯೂ" ಎಂದು ಹೇಳುವವರೂ ( ವಿಟ್ ಜೆನ್ಸ್ಟೈನ್) ಇದ್ದಾರೆ . ಕೆಲವರಿಗೆ "ತಾವು ಆಗಲೇ ಗುರುತಿಸುವ ವಸ್ತು, ಘಟಕಗಳಿಗೆ ಹೆಸರು ಕೊಡುವುದಷ್ಟೇ ಭಾಷೆಯ ಉಪಯೋಗ ಅನಿಸಿದರೆ, “ಭಾಷೆಯೆಂದರೆ ಬರೀ ಪದಗಳ ಸಂಗ್ರಹವಲ್ಲ, ಬದಲಿಗೆ ಅದು ಒಂದು ಸಾಮೂಹಿಕ ಪ್ರಯೋಗ, ಭಾಷೆ ಬೆಳೆಯುವುದು ಹೊಸ ಹೊಸ ಪದಗಳನ್ನು ಸೇರಿಸುವುದರಿಂದ ಅಲ್ಲ, ಬದಲಿಗೆ ಸಂಕಥನಗಳ, ರೂಪಕಗಳ ಬಲದಿಂದ” ಎಂದು ಮಾರ್ಟಿನ್ ಹೈಡೆಗರ್, ವಿಟ್ ಜೆನ್ಸ್ಟೈನ್ ಮೊದಲಾದವರು ಭಾವಿಸಿದ್ದರು. ಹೀಗೆ ಒಂದು ಗುಂಪಿನವರಿಗೆ ಭಾಷೆ ವಿಜ್ಞಾದ ಭಾಗವಾಗಿದ್ದರೆ  ಇನ್ನೊಂದು ಗುಂಪಿನವರಿಗೆ ಅದೊಂದು ಕವಿತೆ, ತಮ್ಮ ಪ್ರಪಂಚವನ್ನು ಬದಲಿಸುವ, ಹೊಸ ಅರ್ಥಗಳನ್ನು ಸ್ಫುರಿಸುವ ಶಕ್ತಿಯುಳ್ಳದ್ದು. 

ಇಲ್ಲಿ ಯಾರ ಅಭಿಪ್ರಾಯ ಸರಿ ಯಾರದು ಸರಿಯಲ್ಲ ಎನ್ನುವುದು ಅವರವರ ವಿವೇಚನೆಗೆ ಬಿಟ್ಟದ್ದು. ಕನ್ನಡ ಅಥವಾ ಇಂಗ್ಲಿಷ್ ಮಾಧ್ಯಮ ಬೇಕೇ ಎನ್ನುವುದೂ ಹಾಗೆಯೇ. 

ನನ್ನ  ಸ್ವಂತ ಅನುಭವದ ಹಿನ್ನೆಲೆಯಲ್ಲಿ ಹೇಳುವುದಾದರೆ ಮಾಧ್ಯಮಿಕ ಶಾಲೆಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತದ್ದು ನನಗೆ ತುಂಬಾ ಉಪಯೋಗವಾಗಿದೆ. ಆದರೆ ಎಲ್ಲರ ಅನುಭವ ಒಂದೇ ಆಗಿರುವುದಿಲ್ಲ.

ಧರ್ಮ, ರಾಜಕೀಯ ಸಿದ್ಧಾಂತ ಇತ್ಯಾದಿಗಳ ಬಗ್ಗೆ ಭಿನ್ನಾಭಿಪ್ರಾಯಗಳಿರುವಂತೇ ಕಲಿಕಾ ಮಾಧ್ಯಮದ ಬಗ್ಗೆಯೂ ಒಮ್ಮತ ಕಷ್ಟದ ವಿಷಯ. ಇವೆಲ್ಲ ಕಾನೂನು ಹೋರಾಟದಿಂದ ಸಾಧಿಸುವಂತಹವಲ್ಲ. ಭಾಷೆಯನ್ನು ಉಳಿಸುವುದೂ ಬೆಳೆಸುವುದೂ ಬಳಸುವವರ ಕೈಯಲ್ಲಿದೆ. 

Sunday, July 23, 2023

ಮಿಲಾನ್ ಕುಂದೆರಾ

ಈಚೆಗೆ ತೀರಿಕೊಂಡ ಮಿಲಾನ್ ಕುಂದೆರಾ ಜೆಕೊಸ್ಲೊವಾಕಿಯಾದ ಕಾದಂಬರಿಕಾರ. ೧೯೭೫ ರಿಂದ ಫ್ರಾನ್ಸ್ ನಲ್ಲಿ ನೆಲೆಸಿದ್ದ ಕುಂದೆರಾ ಎರಡನೇ ಜಾಗತಿಕ ಯುದ್ಧದ ನಂತರದಲ್ಲಿ ತನ್ನ ದೇಶಕ್ಕೆ ಮತ್ತು ತನಗೆ ವೈಯಕ್ತಿಕವಾಗಿ ಆದದ್ದರ ಅನುಭವದಲ್ಲಿ ರಚಿಸಿದ ಕೃತಿಗಳು ಖಾಸಗಿ ಜೀವನದ ಸೂಕ್ಷ್ಮಗಳ ಜೊತೆಗೇ ರಾಜಕೀಯದ ವಿಪರೀತಗಳು ತಳುಕು ಹಾಕಿಕೊಂಡಿರುವುದನ್ನು ಕಟ್ಟಿಕೊಡುವ ಪರಿ ಅದ್ಭುತ.

ಕುಂದೆರಾ ಬರೆದ The Book Of Laughter and Forgetting (ನಗೆ ಮತ್ತು ಮರೆವಿನ ಪುಸ್ತಕ) ಮತ್ತು The Unbearable Lightness of Being (ಇರುವಿಕೆಯ ಅಸಹನೀಯ ಹಗುರತೆ) ಬಹಳ ಮುಖ್ಯವಾದ ಕಾದಂಬರಿಗಳು. ೧೯೬೮ರಲ್ಲಿ ರಷ್ಯನ್ ಸೇನೆ ಜೆಕೋಸ್ಲಾವಿಯಾಕ್ಕೆ ನುಗ್ಗಿ ಸ್ಟಾಲಿನ್ ಮಾದರಿಯ ಕಮ್ಯುನಿಸ್ಟ್ ತತ್ತ್ವದ ನಿಷ್ಟನೊಬ್ಬನನ್ನು ಸ್ಥಾಪಿಸಿದ ಮೇಲೆ ಶುರುವಾದ ದಬ್ಬಾಳಿಕೆ, ಅಲ್ಲಿನ ಜೀವನ ಸಂಸೃತಿಯ ಮೇಲೆ ನಡೆಸಿದ ದಾಳಿ ಇದೆಲ್ಲದರಿಂದ ತಪ್ಪಿಸಿಕೊಳ್ಳಲು ಕುಂದೆರಾ ಕಾರಿನಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಫ್ರಾನ್ಸ್ ಗೆ ಹೋಗಿ ನೆಲೆಸಿದ್ದ. 

ನಗೆ ಮತ್ತು ಮರೆವಿನ ಪುಸ್ತಕ ಕಾದಂಬರಿಯ ಬಗ್ಗೆ ಕನ್ನಡದ ಸಾಹಿತಿ, ಪತ್ರಕರ್ತ ಪಿ ಲಂಕೇಶ್ ತಮ್ಮ 'ಲಂಕೇಶ್ ಪತ್ರಿಕೆ' ಯಲ್ಲಿ ಬರೆದಿದ್ದರು.  

ಕುಂದೆರಾನ ಇನ್ನೊಂದು ಪುಸ್ತಕ The Unbearable Lightness of Being ಸಹ ತೀಕ್ಷ್ಣವಾದ ರಾಜಕೀಯ ಟಿಪ್ಪಣಿ ಉಳ್ಳದ್ದಾಗಿದೆ. ಈ ಕಾದಂಬರಿಯಲ್ಲಿ ಸಬೀನಾ ಎಂಬ ಪಾತ್ರದ ಮೂಲಕ ಕುಂದೆರಾ ಒಂದು ಆಸಕ್ತಿಕರವಾದ ವಿಚಾರವನ್ನು ಮುಂದಿಡುತ್ತಾನೆ. ಇಂಗ್ಲಿಷ್ನಲ್ಲಿ kitsch (ಗೂಗಲ್ ನಲ್ಲಿ ಇದರ ಕನ್ನಡ ಅನುವಾದ 'ಖಾಲಿ ಬೆಡಗು' ಎಂದಿದೆ) ಎಂದು ಕರೆಯುವ ಈ ವಿದ್ಯಮಾನವನ್ನು ಸಬೀನಾ totalitarianism (ನಿರಂಕುಶ ಪ್ರಭುತ್ವ) ಗೆ ಅನ್ವಯಿಸುತ್ತಾಳೆ. ಇಂತಹ ನಿರಂಕುಶ ಪ್ರಭುತ್ವವನ್ನು ಜನ ಒಪ್ಪಿಕೊಂಡಾಗ ಅವರು ಎಲ್ಲವನ್ನೂ ಗುಣಾತ್ಮಕವಾಗೇ ತೆಗೆದುಕೊಳ್ಳುತ್ತಾರೆ. ಇದು ಎಷ್ಟರಮಟ್ಟಿಗೆಂದರೆ ಅವರ ನಿತ್ಯಜೀವನದ ಸಮಸ್ಯೆಗಳನ್ನು ಎದುರಿಸುವ ಶಕ್ತಿಯನ್ನೇ ಕಳೆದುಕೊಳ್ಳುವಷ್ಟು. kitsch ಗೆ 'ಕೆಲಸಕ್ಕೆ ಬಾರದ ಡೌಲು' ಎಂಬ ಅರ್ಥವೂ ಗೂಗಲ್ ನಲ್ಲಿದೆ. ಜನರ ಬ್ರೈನ್ ವಾಶ್ ಮಾಡಲು kitsch ಉಪಯೋಗವಾಗುವುದನ್ನು ಸಬೀನಾ ಗಮನಿಸುತ್ತಾಳೆ. ವೈಯಕ್ತಿಕತೆಯನ್ನೇ ಕಳೆಯುವ ಈ kitsch ಅನ್ನು ಸಬಿನಾಳಿಂದ ಒಪ್ಪಿಕೊಳ್ಳಲಾಗುವುದೇ ಇಲ್ಲ. ಸರ್ವಾಧಿಕಾರ ಹೇಗಿರುತ್ತದೆ ಮತ್ತು ಬೆಂಬಲಿಗರನ್ನೂ ಪಡೆಯುತ್ತದೆ ಎಂಬುದನ್ನು ಕುಂದೆರಾ ಕಾದಂಬರಿಯ ಮೂಲಕ ನಿರೂಪಿಸುವಲ್ಲಿ ಅವನ ಪ್ರತಿಭೆ ನಮ್ಮ ಅನುಭವಕ್ಕೆ ಬರುತ್ತದೆ. ಒಂದು ಪ್ರಬಂಧದಲ್ಲಿ ಅಭಿವ್ಯಕ್ತಿಸಬಹುದಾದಂತಹ ವಿಚಾರಗಳನ್ನು ಕಾದಂಬರಿಯ ಹಂದರದಲ್ಲಿ ಹೊಂದಿಸಿರುವುದು ಅತ್ಯಂತ ಪರಿಣಾಮಕಾರಿಯಾಗಿದೆ.  

Sunday, July 16, 2023

ಪಟ್ಟದ ಮಹಿಳೆಗೀ ವಿಧಿಯೇ !

ಸವಿತಾ ಬನ್ನಾಡಿಯವರು ಬರೆದ ಆಟದಂಗಳದ ಆಚೆಗಿನ ಮುಳ್ಳುಗಳು ಎಂಬ ಲೇಖನವು ನಾಗರೀಕರೆಂದು ಅನಿಸಿಕೊಳ್ಳುವ ಎಲ್ಲರೂ ಯೋಚಿಸಲೇಬೇಕಾದ ವಿಚಾರವನ್ನು ಹೇಳುತ್ತದೆ.

ಕುಮಾರವ್ಯಾಸ ಭಾರತದಿಂದ ಉಲ್ಲೇಖಿಸಿದ ಸಾಲುಗಳು ಅತ್ಯಂತ ಮಾರ್ಮಿಕವಾಗಿವೆ. ನ್ಯಾಯದ ಪ್ರಶ್ನೆಯನ್ನು ಎತ್ತಿರುವ ಮಹಿಳಾ ಕುಸ್ತಿಪಟುಗಳ ಸ್ಥಿತಿಯ ಆಧಾರದಲ್ಲಿ ಲೇಖಕಿ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯಗಳ ಮುಖ್ಯ ಪ್ರಶ್ನೆಗಳನ್ನು ಎತ್ತುತ್ತಾರೆ.

ಕುಮಾರವ್ಯಾಸ ಭಾರತದ ಕಾಲದಿಂದ ಇಂದಿನವರೆಗೂ ಸಮಾಜ ಬದಲಾಗದ ಅಚ್ಚರಿ ಮತ್ತು ವ್ಯಂಗ್ಯ ಲೇಖನದಲ್ಲಿ ಬಲವಾಗಿ ಪ್ರಸ್ತಾಪವಾಗಿದೆ. ದ್ರೌಪದಿಗೆ ಸಂಬಂಧಿಸಿದಂತೆ ಹೆಣ್ಣನ್ನು 'ವಸ್ತು'ವಾಗಿ ಕಾಣುವ ಮನಸ್ಥಿತಿಯೇ ಇಂದು ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯದ ಮೂಲದಲ್ಲಿರುವುದನ್ನು ಊಹಿಸಬಹುದು.

ಶಿಕಾಗೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ, ಪ್ರಖ್ಯಾತ ಸ್ತ್ರೀವಾದಿ ಚಿಂತಕಿ ಮಾರ್ಥಾ ನಸ್ಬಾಮ್ ಬರೆದಿರುವ 'ಸಿಟಡೆಲ್ಸ್ ಆಫ್ ಪ್ರೈಡ್' (Citadels of Pride) ಎಂಬ ಪುಸ್ತಕವು ಅಧಿಕಾರಯುತ ಸ್ಥಾನದಲ್ಲಿರುವ ವ್ಯಕ್ತಿಗಳಿಂದ ನಡೆಯುವ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಗಳ ವಿದ್ಯಮಾನಗಳನ್ನು ಗಂಭೀರವಾಗಿ ಶೋಧಿಸುವ ಒಂದು ಪ್ರಯತ್ನವಾಗಿದೆ.

ಪ್ರತಿಷ್ಟೆ ಹೆಚ್ಚಾದಾಗ ಬೇರೆಯವರನ್ನು ತಮ್ಮ ಉಪಯೋಗದ ವಸ್ತುಗಳನ್ನಾಗಿ ಭಾವಿಸುವುದೇ ಲೈಂಗಿಕ ಕಿರುಕುಳಕ್ಕೆ ಕಾರಣ. ಪ್ರತಿಷ್ಟೆಯು ಹೇಗೆ ಕೆಲವರನ್ನು ಸಾಮಾನ್ಯರಿಗಿರುವ ಕಟ್ಟುಪಾಡುಗಳಿಂದ ಮುಕ್ತಗೊಳಿಸಿ ಸ್ವೇಚ್ಛೆಯ ವರ್ತನೆಗೆ ಹಚ್ಚುತ್ತದೆಂಬುದನ್ನು ಕೆಲವು ನಿಜಘಟನೆಗಳು ಮತ್ತು ವ್ಯಕ್ತಿಗಳ ಉದಾಹರಣೆಯೊಂದಿಗೆ ಈ ಪುಸ್ತಕದಲ್ಲಿ ವಿಶ್ಲೇಷಿಸಲಾಗಿದೆ. ನಮ್ಮ ದೇಶದಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ನಂತಹವರು ಯಾರ ಅಳವಿಗೂ ಸಿಗದ ಸ್ವೇಚ್ಛೆಯ ಶಕ್ತಿಯನ್ನು ಪಡೆಯುವುದು ಸಹ ಹೀಗೆಯೇ.

ಇಂತಹ ಲೈಂಗಿಕ ಹಿಂಸೆಗೆ ನ್ಯಾಯ ವ್ಯವಸ್ಥೆಯ ಮತ್ತು ಸಾಮಾಜಿಕ ವ್ಯವಸ್ಥೆಯು ಪ್ರತಿಕ್ರಿಯಿಸುವ ಬಗೆಯನ್ನೂ ಲೇಖಕಿ ಶೋಧಿಸುತ್ತಾರೆ. ಅಪರಾಧ ಕಾನೂನು, ಪೌರ ಕಾನೂನು, ಸಾಮಾಜಿಕ ನೀತಿ, ನೈತಿಕ ಶಿಕ್ಷಣ ಇವೆಲ್ಲದರ ಸಂಯೋಜನೆಯಿಂದ ಇಂತಹ ಅಹಿತಕರ ವಿದ್ಯಮಾನಗಳನ್ನು ತಡೆಯಬಹುದೆಂದು ಮಾರ್ಥಾ ಅವರು ಅಭಿಪ್ರಾಯಪಡುತ್ತಾರೆ.

'ಯತ್ರ ನಾರೀ ಪೂಜ್ಯಂತೇ...' ಎಂದೆಲ್ಲ ಮಹಿಳೆಯನ್ನು ದೇವಿ ಪಟ್ಟಕ್ಕೆ ಏರಿಸುತ್ತಲೇ ಆಕೆಯ ಸ್ವಾಭಾವಿಕ ಹಕ್ಕಾದ ಸಮಾನತೆ ಮತ್ತು ಗೌರವವನ್ನು ನಿರಾಕರಣೆ ಮಾಡುವುದು ಯಾವುದೇ ನಾಗರೀಕ ಸಮಾಜವು ತಲೆ ತಗ್ಗಿಸುವಂತಹ ಸಂಗತಿ. ಕುಸ್ತಿಪಟುಗಳಿಗಾದ ಅನುಭವದ ಹಿನ್ನೆಲೆಯಲ್ಲಿ ಲಿಂಗ ಸಮಾನತೆಯ ಬಗೆಗಿನ ತಮ್ಮ ಧೋರಣೆಗಳನ್ನು ಎಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳುವ ಕಾಲ ಇದಾಗಿದೆ. ಕಾನೂನಿಗಿಂತ ಹೆಚ್ಚಾಗಿ ಮನಸ್ಸುಗಳ ಬದಲಾವಣೆ ಹೆಚ್ಚು ಪರಿಣಾಮಕಾರಿಯಾಗಬಲ್ಲದು.

ಇಂತಹ ವಿಚಾರಗಳ ಬಗೆಗೆ ಹೆಚ್ಚು ಹೆಚ್ಚು ಜಾಗೃತಿಯ ಅಗತ್ಯ ಇದೆ. ಮಹಿಳಾವಾದ ಎಲ್ಲರಿಗೂ ಸಂಬಂಧಿಸಿದ್ದಾಗಿದೆ. ಎಲ್ಲರಲ್ಲೂ ಆರೋಗ್ಯಕರವಾದ ಮನಸ್ಥಿತಿಯಿದ್ದರಷ್ಟೇ ಅನಾಹುತಕಾರಿ ಘಟನೆಗಳನ್ನು ತಪ್ಪಿಸುವುದು ಸಾಧ್ಯ.

ಮಹಿಳಾವಾದವು ಒಂದು ಹೋರಾಟವಾಗಿ ಹದಿನೆಂಟನೇ ಶತಮಾನದ ಕೊನೆಯಿಂದಲೇ ನಡೆದುಬಂದಿದ್ದರೂ ಬದಲಾವಣೆ ಮಾತ್ರ ಇಂದಿಗೂ ಪೂರ್ಣವಾಗಿ ಸಾಧ್ಯವಾಗಿಲ್ಲ.

ಎರಡು ವರ್ಷಗಳ ಹಿಂದೆ ಸಾವಣ್ಣ ಪ್ರಕಾಶನ ಸಂಸ್ಥೆಯವರು ಮಹಿಳಾದಿನದ ಹಿನ್ನೆಲೆಯಲ್ಲಿ ಲೇಖನ ಸಂಗ್ರಹವೊಂದನ್ನು ಹೊರತಂದಿದ್ದರು. ಹದಿನಾರು ಮಹಿಳಾ ಲೇಖಕಿಯರ ಲೇಖನಗಳನ್ನು ಒಳಗೊಂಡಿದ್ದ ಈ ಪುಸ್ತಕವು ಏನೋ ಹೇಳುತ್ತಿದ್ದಾರೆ ಎಂಬ ಹೆಸರಿನಲ್ಲಿ ಪ್ರಕಟವಾಗಿತ್ತು. ಲಿಂಗ ಸಮಾನತೆಗೆ ಸಂಬಂಧಿಸಿದಂತೆ ಆಸಕ್ತಿಕರ ಉಲ್ಲೇಖಗಳು ಆ ಪುಸ್ತಕದಲ್ಲಿದ್ದವು.

'ಒಲಿಂಪಿಕ್ ಪದಕ ಗೆದ್ದ ಮಹಿಳೆಯರಿಗೆ ಈ ವಿಧಿಯೇ' ಎನ್ನುವ ಉದ್ಗಾರದ ಆಚೆಗೂ ಮೀರಿದ ಬೆಂಬಲ ನಮ್ಮ ಕುಸ್ತಿಪಟುಗಳಿಗೆ ಸಿಗಬೇಕಾದರೆ ಜನರ ಮನಸ್ಥಿತಿಯಲ್ಲಿ ಗಂಭೀರ ಬದಲಾವಣೆ ಆಗಬೇಕು.

Sunday, July 9, 2023

ನಿಜವಾದ ಶಿಕ್ಷಣ

ಪ್ರಶ್ನಿಸಲು ಕಲಿಸದ್ದು ಶಿಕ್ಷಣವೇ? ಎಂಬ ಪ್ರಜಾವಾಣಿಯ ಲೇಖನದಲ್ಲಿ ಡಾ. ಜ್ಯೋತಿಯವರು ಇಂದಿನ ಒಂದು ದೊಡ್ಡ ಸಮಸ್ಯೆಯತ್ತ ಗಮನ ಸೆಳೆದಿದ್ದಾರೆ. ಅದೇನೆಂದರೆ, ವ್ಯವಸ್ಥೆಯನ್ನು ಅದರೆಲ್ಲಾ ಅಸಮರ್ಪಕತೆಗಳ ಜೊತೆಯೇ  ಒಪ್ಪಿಕೊಂಡು ಪಾಲಿಸುವ ಪ್ರವೃತ್ತಿ. ಇದು ಇಡಿಯ ಸಮಾಜದ ಸಮಸ್ಯೆಯಾಗಿದ್ದರೂ ಈ ಸಮಸ್ಯೆಯ ಹುಟ್ಟಿನಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯ ಪಾತ್ರವನ್ನು ಈ ಲೇಖನದಲ್ಲಿ ಶೋಧಿಸಲಾಗಿದೆ. 

ಕೇವಲ ಉದ್ಯೋಗ ಕಟ್ಟಿಕೊಳ್ಳಲು ಸಹಾಯ ಮಾಡುವ, ಇತರ ಮೌಲ್ಯಗಳನ್ನು ಒಳಗೊಳ್ಳದ ಶಿಕ್ಷಣವು ಸ್ವತಂತ್ರವಾಗಿ ಯೋಚಿಸುವುದನ್ನು ಕಲಿಸದೆ ಹೋಗುವುದರಿಂದ ಅದು ‘ನಿಜವಾದ ಶಿಕ್ಷಣ' ಎನಿಸಿಕೊಳ್ಳಲು ಯೋಗ್ಯವೇ ಎನ್ನುವುದು ಸರಿಯಾದ ಪ್ರಶ್ನೆಯೇ. 

ಕೆಲವು ವರ್ಷಗಳ ಹಿಂದೆ ಕಾರ್ತಿಕ್ ಮುರಳೀಧರನ್ ಅವರು ಬರೆದ  “Reforming the Indian School Education System" (ಭಾರತದಲ್ಲಿ ಶಾಲಾ  ಶಿಕ್ಷಣದ ಸುಧಾರಣೆ ) ಎಂಬ ಲೇಖನವು ಶಿಕ್ಷಣ ಕ್ಷೇತ್ರದ ಕೆಲವು ಮುಖ್ಯ ಸಮಸ್ಯೆಗಳನ್ನು ದಾಖಲಿಸಿತ್ತು. ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳ ಆಯ್ಕೆ ಹೀಗೆ ಎರಡು ಮುಖ್ಯ ಉದ್ದೇಶಗಳು  ಶಾಲಾ ಶಿಕ್ಷಣಕ್ಕೆ ಇದ್ದರೂ ಇದರಲ್ಲಿ ಮೊದಲನೆಯ ಉದ್ದೇಶ ಹೇಗೆ ಅಲಕ್ಷಿಸಲ್ಪಟ್ಟು ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣಕ್ಕೆ  ಆರಿಸುವುದಷ್ಟೇ ಮುಖ್ಯವಾಗುತ್ತಿರುವ ಬಗ್ಗೆ ಲೇಖನದಲ್ಲಿ ವಿವರಿಸಿದೆ. ಹಾಗೆಯೇ, ಸಮಾಜದಲ್ಲಿನ ಅಸಮಾನತೆ, ಪಠ್ಯಕ್ರಮದಲ್ಲಿ ಆಗದ ಅಗತ್ಯ ಬದಲಾವಣೆ, ಪರೀಕ್ಷೆಯಲ್ಲಿ ಪಾಸು ಮಾಡುವುದೇ  ಮುಖ್ಯವಾಗಿ ವಿಷಯ ಅರ್ಥ ಮಾಡಿಕೊಳ್ಳುವುದಕ್ಕಿಂತ ಉರು ಹೊಡೆದಾದರೂ ಪಾಸು ಮಾಡುವುದು ಮುಖ್ಯವಾಗುವುದು, ಹೀಗೇ ಅನೇಕ ಅಂಶಗಳಿರುವುದು ಲೇಖನದಲ್ಲಿ ತಿಳಿಯುತ್ತದೆ. 

ಮಕ್ಕಳ ಬೌದ್ಧಿಕ ಬೆಳವಣಿಗೆಯ ಆರಂಭದ ಹಂತದಲ್ಲಿ ಮಕ್ಕಳ ಮನಸ್ಸಿನ ಮೇಲೆ ಬೋಧಕರ ಪ್ರಭಾವ ಹೆಚ್ಚಾಗಿಯೇ ಇರುತ್ತದೆ. ಈ ಹಂತದಲ್ಲಿ ಮಕ್ಕಳಲ್ಲಿ ಬೇರೆ ಬೇರೆ ವಿಷಯಗಳ ಸಾಧ್ಯವಾದಷ್ಟೂ ಅರಿವು ಮೂಡಿಸುವುದು, ಪಠ್ಯದ  ಆಚೆಗೂ ಪುಸ್ತಕಗಳನ್ನು ಓದಿ ವಿಚಾರಗಳನ್ನು ಅರಿಯುವ ಕುತೂಹಲ ಬೆಳೆಸುವುದೂ ಬೋಧಕರಿಂದ ಸಾಧ್ಯವಾದರೆ  ವಿಚಾರ ಕ್ರಾಂತಿ ಸಾಧ್ಯವಾಗಬಹುದೇನೋ. ಇಲ್ಲದಿದ್ದರೆ ಶಿಕ್ಷಣವು ಬರೀ ಮಾಹಿತಿಯ ಸಂಗ್ರಹಣೆ ಅಷ್ಟೇ ಆಗಿ, ಮುಂದೆ ಆ ವಿದ್ಯಾರ್ಥಿಗಳು ನಿಸಾರರ ಕವಿತೆಯ 'ಮಂದೆಯಲಿ ಒಂದಾಗಿ ಸ್ವಂತತೆಯೇ ಬಂದಾಗಿ' ಸಾಗುವ ಮಂದಿಯಾಗಿ ದೇಶವನ್ನು ವೈಚಾರಿಕವಾಗಿ ಹಿಂದೆ ಹಿಂದೆ ತೆಗೆದುಕೊಂಡು ಹೋಗುವವರ ಸಾಧನಗಳಾಗಿ ಬಿಡುವ ಸಾಧ್ಯತೆ ಹೆಚ್ಚಾಗುತ್ತದೆ. 

ಶಾಲೆಯಲ್ಲಿರುವ ಸಮಯದಲ್ಲಷ್ಟೇ ಅಲ್ಲದೆ ಶಾಲೆಯ ಆಚೆಗೂ ಮಕ್ಕಳು ಮಾಧ್ಯಮಗಳನ್ನು ಉಪಯೋಗಿಸಿಕೊಂಡು ತಮ್ಮ ಅರಿವಿನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುವುದರ ಬಗ್ಗೆ ಅನೇಕ ಶಿಕ್ಷಕರೂ , ಶಿಕ್ಷಣ ತಜ್ಞರೂ  ಗಂಭೀರವಾಗಿ ಯೋಚಿಸುತ್ತಿದ್ದಾರೆ. ಸಂಜನಾ ಸಾಮ್ರಾಜ್ ಎಂಬವರು ನಡೆಸಿಕೊಂಡು ಬರುತ್ತಿರುವ 'The Untextbook Project' (ದಿ ಅನ್ ಟೆಕ್ಸ್ಟ್ ಬುಕ್ ಪ್ರಾಜೆಕ್ಟ್ ) ಎಂಬ ಪಾಡ್ಕಾಸ್ಟ್ನಲ್ಲಿ  ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳ ಬಗೆಗೆ ಆಸಕ್ತಿಕರ ಸಂವಾದಗಳಿರುತ್ತವೆ.   ಏಪ್ರಿಲ್ ನಲ್ಲಿ 'Mastering A Subject Vs Rote Learning' ( ವಿಷಯದಲ್ಲಿ ಪರಿಣತಿ ಪಡೆಯುವುದು Vs ಉರು ಹೊಡೆಯುವುದು) ಮತ್ತು 'The Urgent Need for Media Literacy' (ಮಾಧ್ಯಮ ಸಾಕ್ಷರತೆಯ ತಕ್ಷಣದ ಅಗತ್ಯ ) ಎಂಬ ಎರಡು ಆಸಕ್ತಿಕರ ಕಂತುಗಳಿದ್ದವು. 

ಸ್ವಂತವಾಗಿ ಯೋಚಿಸುವುದನ್ನು ಕಲಿಸುವ ನಿಜವಾದ ಶಿಕ್ಷಣವೊಂದೇ  ಸಿದ್ಧ ಮಾದರಿಯ ವ್ಯವಸ್ಥೆಯನ್ನು ಪ್ರಶ್ನಿಸುವ, ಮತ್ತು ಒಂದು ಮಾನವೀಯ, ನ್ಯಾಯಪರ, ಸುಸ್ಥಿರ ಸಮಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಬಲ್ಲ ಭವಿಷ್ಯದ ಪ್ರಜೆಗಳನ್ನು ರೂಪಿಸಬಲ್ಲದು. 

Saturday, July 1, 2023

ಗ್ರಂಥಾಲಯಗಳು

ಇತ್ತೀಚೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಗ್ರಂಥಾಲಯ ಮಹತ್ವ ಮತ್ತು ಪುನಶ್ಚೇತನ ಕ್ರಮ ಎಂಬ ಲೇಖನವು ನನ್ನಲ್ಲಿ ಹಲವು ನೆನಪುಗಳನ್ನು, ಆಲೋಚನೆಗಳನ್ನೂ ಎಚ್ಚರಗೊಳಿಸಿತು.

ಗ್ರಂಥಾಲಯಗಳೊಟ್ಟಿಗಿನ  ಮತ್ತು ಪುಸ್ತಕಗಳೊಟ್ಟಿಗಿನ ನನ್ನ ಮೊದಲ ಅನುಭವಗಳನ್ನು  ನೆನೆಯಹೊರಟರೆ ಅದು ನನ್ನನ್ನು ಬಹಳ ಹಿಂದಿನ ದಿನಗಳಿಗೆ ಕೊಂಡೊಯ್ಯುವುದು. ಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿದ್ದ ಒಂದೇ ಒಂದು ಕಬ್ಬಿಣದ ಪೆಟ್ಟಿಗೆಯ ಪುಸ್ತಕ ಸಂಗ್ರಹ.  ಮುಂದೆ ಮೈಸೂರಿನಲ್ಲಿ ಪ್ರೌಢಶಾಲೆಯಲ್ಲಿ ಓದುವಾಗ ಆ ಶಾಲೆಯಲ್ಲಿದ್ದ ಅದ್ಭುತ ಗ್ರಂಥಾಲಯ ಮತ್ತು ಅಲ್ಲಿನ ಗ್ರಂಥಪಾಲಕರು ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿಯನ್ನು ಮೂಡಿಸುವ ಸಲುವಾಗಿ ತೆಗೆದುಕೊಳ್ಳುತ್ತಿದ್ದ ಲೈಬ್ರರಿ  ಕ್ಲಾಸ್, ಇದೆಲ್ಲ ನೆನಪಾಗುವುದು.  

ಪ್ರಜಾವಾಣಿಯ ಲೇಖನದಲ್ಲಿ, ಸಾರ್ವಜನಿಕ ಗ್ರಂಥಾಲಯಗಳ ಪುನಶ್ಚೇತನಕ್ಕಾಗಿ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಓದಿದ್ದು ಭರವಸೆ ಮೂಡಿಸುತ್ತದೆ. ಇದು ಅತ್ಯಂತ ಅಗತ್ಯವಾಗಿ ಆಗಬೇಕಾಗಿರುವ ಕಾರ್ಯ. ಅಜೀಮ್ ಪ್ರೇಮ್ ಜೀ ಸಂಸ್ಥೆಯು ದೇಶಾದ್ಯಂತ ವಿವಿಧ ಪಟ್ಟಣಗಳಲ್ಲಿ ೨೭೮ ಗ್ರಂಥಾಲಯಗಳನ್ನು ನಿರ್ವಹಿಸುತ್ತಿರುವ ವಿಚಾರ ಸ್ವಾಗತಾರ್ಹವಾದದ್ದು. 

ಇತರ ಹಲವು ಸಂಘ ಸಂಸ್ಥೆಗಳು ಮತ್ತು ಸರ್ಕಾರದ ಇಲಾಖೆಗಳು ಸಹ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಉಮಾ ಮಹಾದೇವನ್ ಎಂಬ ಅಧಿಕಾರಿಯೊಬ್ಬರು ಗ್ರಾಮೀಣ ಭಾಗಗಳಲ್ಲಿ ಗ್ರಂಥಾಲಯಗಳ ಆರಂಭ ಮತ್ತು ಪುನಶ್ಚೇನದ ಕಾರ್ಯಕ್ರಮಗಳ ಬಗೆಗೆ ಸಾಮಾಜಿಕ ಮಾಧ್ಯಮದಲ್ಲಿ ಆಗಾಗ ಹಂಚಿಕೊಳ್ಳುತ್ತಾರೆ. ಗ್ರಾಮೀಣ ಭಾಗದ ಜನತೆ, ಅದರಲ್ಲೂ ಮಕ್ಕಳು ಪುಸ್ತಕಲೋಕಕ್ಕೆ ತೆರೆದುಕೊಳ್ಳುವುದು ಸಂತಸದ ವಿಷಯ. ಸ್ಥಳೀಯವಾದ ರಚನಾತ್ಮಕ ಕಾರ್ಯಕ್ರಮಗಳು ಸಾರ್ವಜನಿಕ ಗ್ರಂಥಾಲಯಗಳ ಮಾಂತ್ರಿಕತೆಯನ್ನು ಹರಡುತ್ತಿರುವ ಬಗ್ಗೆ ಉಮಾ ಅವರು 'ದಿ ಹಿಂದೂ' ಪತ್ರಿಕೆಯಲ್ಲಿ ಲೇಖನವನ್ನೂ ಬರೆದಿದ್ದರು. 

ಮೊನ್ನೆ ಪ್ರಜಾವಾಣಿಯಲ್ಲಿ ಇನ್ನೊಂದು ವರದಿ ಪ್ರಕಟವಾಗಿತ್ತು. "ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೈಟೆಕ್ ಗ್ರಂಥಾಲಯ” ಎಂಬ ಈ ಲೇಖನ ಕಲಬುರ್ಗಿಯ ಜೇವರ್ಗಿಯಲ್ಲಿ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಉತ್ತೇಜಿಸಲು ಕಾಲೇಜೊಂದರ ಸಿಬ್ಬಂದಿ ಕೈಗೊಳ್ಳುತ್ತಿರುವ ವಿಶಿಷ್ಟ ಮತ್ತು ಸೃಜನಾತ್ಮಕ ಚಟುವಟಿಕೆಗಳ ಕುರಿತಾಗಿತ್ತು . 

ವೈಯಕ್ತಿಕವಾಗಿ ನಾನು ಪುಸ್ತಕಗಳಿಂದ ಜೀವನದಲ್ಲಿ ಪ್ರಭಾವಿಸಲ್ಪಟ್ಟಿರುವುದು, ಪಡೆದಿರುವುದು ಬಹಳಷ್ಟಿದೆ. ಹೀಗಾಗಿಯೇ ಗ್ರಂಥಾಲಯಗಳ ಉಪಯುಕ್ತತೆಯ ಬಗ್ಗೆ ಮತ್ತು ಅವುಗಳ ಪುನಶ್ಚೇತನದ ಅಗತ್ಯದ ಬಗ್ಗೆ ನನಗೆ ಅನುಮಾನವೇ ಇಲ್ಲ. ಪುಸ್ತಕಗಳಿಂದ ಆಗುವ ಪ್ರಯೋಜನಗಳ ಬಗ್ಗೆ ಹೇಳುತ್ತಾ ಹೋದರೆ ಅದಕ್ಕೆ ಕೊನೆ ಮೊದಲಿಲ್ಲ. 

ತಕ್ಷಣಕ್ಕೆ ಹೊಳೆಯುವುದಿಷ್ಟು-

ಪುಸ್ತಕಗಳು ಸ್ಪೂರ್ತಿದಾಯಕವಾಗಿರಬಲ್ಲವು. ಅದರಲ್ಲೂ ಜೀವನಚಿತ್ರಗಳು ಸಾಧಕರ ಹಾದಿಯಲ್ಲಿನ ಏಳುಬೀಳುಗಳು  ಹಾಗೂ ಅವನ್ನು ಅವರು ನಿಭಾಯಿಸುವುದರ ವಿವರಗಳನ್ನು ಕಟ್ಟಿಕೊಡಬಲ್ಲವು. ಉದಾಹರಣೆಗೆ,  ಭಾರತದಲ್ಲಿ ಹಾಲು ಉತ್ಪಾದನೆಯಲ್ಲಿ ಕ್ರಾಂತಿಯನ್ನೇ ಮಾಡಿದ ಡಾ ವರ್ಗಿಸ್ ಕುರಿಯನ್ ಅವರ ಆತ್ಮಚರಿತ್ರೆ 'ಐ ಟೂ ಹ್ಯಾಡ್ ಎ ಡ್ರೀಮ್', ದೇಶದಲ್ಲಿ ಬಾಹ್ಯಾಕಾಶ ಸಂಶೋಧನೆಗೆ ಅಡಿಪಾಯ ಹಾಕಿದ ವಿಕ್ರಂ ಸಾರಾಭಾಯಿಯವರ ಕುರಿತಾದ 'ವಿಕ್ರಂ ಸಾರಾಭಾಯ್ - ಎ ಲೈಫ್'   ಇವು ಈ ಬಗೆಯ ಪುಸ್ತಕಗಳು. ಇತ್ತೀಚಿಗೆ ಪ್ರಕಟವಾಗಿರುವ ಎಚ್ ಡಿ ದೇವೇಗೌಡರ ಜೀವನದ ಕುರಿತಾದ 'ಫರೋಸ್ ಇನ್ ಎ ಫೀಲ್ಡ್ '  ಸಹ ಅತ್ಯುತ್ತಮ ಜೀವನಚಿತ್ರಗಳಲ್ಲೊಂದು.

ಪುಸ್ತಕಗಳಿಂದ ರಂಜನೆ ಅಷ್ಟೇ ಅಲ್ಲ, ಅವು ನಮ್ಮನ್ನು ಅಳಿಸುವ, ಕಷ್ಟದ ಕ್ಷಣಗಳಲ್ಲಿ ಸಾಂಗತ್ಯ ಒದಗಿಸುವ, ನೆಮ್ಮದಿ ತರುವ ಶಕ್ತಿಯನ್ನೂ ಪಡೆದಿವೆ. ಬೆಳೆಯುವ ಮಕ್ಕಳ ಮನಸ್ಸಿನ ಮೇಲೆ ದೀರ್ಘಾವಧಿಯಲ್ಲಿ ಪ್ರಯೋಜನಕಾರಿಯಾಗುವ ಪರಿಣಾಮವನ್ನು ಪುಸ್ತಕಗಳು ಬೀರಬಲ್ಲವು. 

ಪುಸ್ತಕಗಳು ಸಂಪರ್ಕ ಸೇತುಗಳಾಗಬಲ್ಲವು. ವಿಸ್ತಾರವಾದ ಪ್ರಪಂಚದೊಂದಿಗೆ, ನಮ್ಮ ಹಿಂದಿನ ಈಗಿನ ಮುಂದಿನ ಕಾಲದೊಂದಿಗೆ, ಎಲ್ಲ ದೇಶ ಜನಾಂಗ ಸಂಸ್ಕೃತಿಗಳ ಜನರೊಂದಿಗೆ ನಮ್ಮನ್ನು ಬೆಸೆಯುವ ಸಾಧನವಾಗಿ ಪುಸ್ತಕಗಳಿಗಿಂತ ಬೇರೊಂದಿಲ್ಲ. 

ಪುಸ್ತಕಗಳಿಂದ ನಿಜವಾದ ಶಿಕ್ಷಣ ಸಾಧ್ಯ . ನಿಜವಾಗಿ ಶಿಕ್ಷಿತರಾಗುವುದೆಂದರೆ ನಮ್ಮ ಓದು ಬರವಣಿಗೆಯ ಮೂಲಕ ರಾಜಕೀಯ, ಸಾಮಾಜಿಕ, ನ್ಯಾಯಿಕ, ಸಾಂಸ್ಕೃತಿಕ ಕೌಶಲಗಳನ್ನು ಅರಿಯುವುದು. ವಿಚಾರಗಳನ್ನು ಪರಾಮರ್ಶಿಸುವ, ನಮ್ಮೊಳಗನ್ನೇ ಪರೀಕ್ಷೆಗೆ ಒಡ್ಡಿಕೊಳ್ಳುವ, ಇತರರ ಜೀವನ ರೀತಿಯನ್ನು ಅರಿಯುವುದು ಮತ್ತು  ಒಪ್ಪಿಕೊಳ್ಳುವುದನ್ನು ಕಲಿಯುವುದು. ಚಲನಚಿತ್ರ, ಟೆಲಿವಿಷನ್, ಅಥವಾ ವಾಟ್ಸಾಪ್ ನಿಂದ ಇದು ಸಾಧ್ಯವಾಗದು. ಕನ್ನಡದ ಪ್ರಖ್ಯಾತ ಕಾದಂಬರಿಕಾರ ಮತ್ತು ಕತೆಗಾರರಾಗಿದ್ದ ಯಶವಂತ ಚಿತ್ತಾಲರು ನಾವೇಕೆ ಓದಬೇಕು ಎಂಬ ಬಗ್ಗೆ ಬರೆಯುತ್ತ, ನಮ್ಮ ಜೀವನದ ಮಟ್ಟವನ್ನು ಸುಧಾರಿಸಿಕೊಳ್ಳಲು ನಾವು ಶ್ರಮಿಸುವಂತೆಯೇ ನಮ್ಮ ನೋಡುವ ಭಾವಿಸುವ ಯೋಚಿಸುವ  ಮಟ್ಟವನ್ನೂ ನಾವು  ಸುಧಾರಿಸಿಕೊಳ್ಳಬೇಕು ಮತ್ತು ಇದು ಪುಸ್ತಕಗಳ ಓದಿನಿಂದಲೇ ಸಾಧ್ಯ ಎಂದು ಬರೆದಿದ್ದರು. 

"ಸ್ವರ್ಗ ಎನ್ನುವುದಿದ್ದರೆ ಅದೊಂದು ಗ್ರಂಥಾಲಯದಂತೆ ಇರುತ್ತದೆ ಎಂದೇ ನಾನು ಯಾವಾಗಲೂ ಕಲ್ಪಿಸಿಕೊಂಡಿದ್ದೇನೆ" - ಜೋರ್ಜ್ ಲೂಯಿ ಬೋರ್ಜೆ 

ಈ ಹೇಳಿಕೆ ಗ್ರಂಥಾಲಯಗಳ ಮಹತ್ವವನ್ನು  ತೋರುವಂತಿದೆ. ಇಂಟರ್ನೆಟ್ ಯುಗದಲ್ಲಿ ಪುಸ್ತಕ ಪ್ರೀತಿ ಚಿಕ್ಕವರು ದೊಡ್ಡವರು ಎಲ್ಲರಲ್ಲೂ ಜಾಗೃತವಾಗಬೇಕಿದೆ. 

ಜಾತಿಗಣತಿ ಸಮೀಕ್ಷಾ ವರದಿ: ರಾಜಕೀಯ ಸಂಚಲನ

ಈ ತಿಂಗಳ ಆರಂಭದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರದಲ್ಲಿ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿದಾಗಿನಿಂದ ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವು ಸ್ವತಂತ್...