Sunday, August 27, 2023

ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಲು ಅಸ್ತ್ರವಾಗುವುದೇ ಹೊಸ ಶಿಕ್ಷಣ ನೀತಿ

"ಚಂದ್ರಯಾನದ ಸಂಭ್ರಮದಲ್ಲಿ ಮುಳುಗಿದ್ದರೂ ನಮ್ಮ ಸುತ್ತಲಿನ ನೆಲದ ವಾಸ್ತವಗಳನ್ನು ಗಮನಿಸಿದಾಗ, ನಮ್ಮ ಸಮಾಜ ಈ ಹೊತ್ತಿನಲ್ಲೂ ವೈಜ್ಞಾನಿಕ ಚಿಂತನೆ ಮತ್ತು ವೈಚಾರಿಕ ಪ್ರಜ್ಞೆಯಿಂದ ಬಹುದೂರ ಇರುವುದು ಢಾಳಾಗಿ ಗೋಚರಿಸುತ್ತದೆ." ಪ್ರಜಾವಾಣಿಯಲ್ಲಿ 'ಶಿಕ್ಷಣ ನೀತಿ– ವೈಚಾರಿಕತೆಯೇ ಬುನಾದಿಯಾಗಲಿ' ಎಂಬ ಲೇಖನದಲ್ಲಿ  ಈ ಸಾಲುಗಳನ್ನು ಓದುವಾಗ ವಿಷಾದ, ನಿರಾಶೆ, ಹತಾಶೆ ಎಲ್ಲ ಏಕ ಕಾಲಕ್ಕೆ ಅವರಿಸಿದವು.  ಈ ಪುಟ್ಟ ಲೇಖನದಲ್ಲಿರುವ ತುರ್ತು ಸಂದೇಶ ಅಧಿಕಾರದಲ್ಲಿರುವವರಿಗೆ ತಲುಪಲಿ ಎಂದು ಆಶಿಸೋಣ. ನಮ್ಮ ಸಮಾಜದಲ್ಲಿರುವ ಅದೆಷ್ಟೋ ಅನಿಷ್ಟಗಳಿಗೆ ಮೂಲ ವೈಚಾರಿಕ-ವೈಜ್ಞಾನಿಕ ಚಿಂತನೆಯ ಕೊರತೆಯೇ ಆಗಿದೆ. 

"ವಿಜ್ಞಾನ ಜಗತ್ತು ತನ್ನ ಮೇರು ಶಿಖರವನ್ನು ತಲುಪಿರುವ ಹೊತ್ತಿನಲ್ಲಿ, ನಮ್ಮ ಶಾಲೆಯ ಅಂಗಳದಲ್ಲೇ ಯಾವುದೋ ಕಾಲದ ಮೌಡ್ಯ ಮತ್ತು ಅಂಧ ಅನುಸರಣೆಯ ಮಾದರಿಗಳನ್ನು ಅನುಸರಿಸುವ ಮೂಲಕ ಮಕ್ಕಳನ್ನು ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವದಿಂದ ವಂಚಿತರನ್ನಾಗಿ ಮಾಡುವ ಅಪಾಯ ನಮ್ಮೆದುರಿನಲ್ಲಿದೆ." ಇದನ್ನು ಓದುವಾಗ ಹತ್ತು ವರ್ಷಗಳ ಹಿಂದೆ ನಡೆದ ಘಟನೆಗಳು ನೆನಪಾದವು. 

ನರೇಂದ್ರ ಧಾಬೋಲ್ಕರ್ ಎಂಬ ಮೂಢನಂಬಿಕೆ ವಿರೋಧಿ ಕಾರ್ಯಕರ್ತರು ಮಹಾರಾಷ್ಟ್ರದಲ್ಲಿ ಹತ್ಯೆಗೀಡಾಗಿದ್ದರು.  ಅದಾಗಿ ನಾಲ್ಕೇ ದಿನಗಳಲ್ಲಿ ಮಹಾರಾಷ್ಟ್ರ ಸರ್ಕಾರವು "ಮೂಢನಂಬಿಕೆಗಳು ಹಾಗೂ ಬ್ಲ್ಯಾಕ್ ಮ್ಯಾಜಿಕ್ ನಿಷೇಧ" ಕ್ಕಾಗಿ ಸುಗ್ರೀವಾಜ್ಞೆಯೊಂದನ್ನು ಜಾರಿಗೊಳಿಸಿತ್ತು. ಆ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಸಹ 'ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಮಸೂದೆ' ಯೊಂದರ ಬಗ್ಗೆ ಯೋಚಿಸಿತ್ತು. ಮಸೂದೆಯ ಕರಡಿನ ಪ್ರತಿ ಪ್ರಕಟವಾಗುತ್ತಿದ್ದಂತೆ ಒಂದು ರಾಜಕೀಯ ಪಕ್ಷದಿಂದ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ರಾಜಕಾರಣಿಗಳಲ್ಲಿ ಸಾಮಾನ್ಯ ಗುಣ ಎಂಬಂತೆ ತೋರುವ ಮೂಢನಂಬಿಕೆಗೆ ಹೊರತಾದವರಂತೆ ಕಂಡುಬರುತ್ತಿದ್ದ ಸಿದ್ದರಾಮಯ್ಯನವರಿಗೂ  ಮಸೂದೆಯನ್ನು ಕಾನೂನಾಗಿ ಪರಿವರ್ತಿಸಲು ಸಾಧ್ಯವಾಗಿರಲಿಲ್ಲ ಎಂದು ನನ್ನ ನೆನಪು. 

ಇದೀಗ ಮತ್ತೆ ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ಕಾರ್ಯಕ್ರಮವೊಂದರಲ್ಲಿ 'ಮಕ್ಕಳು ವಿಜ್ಞಾನ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಬೆಳೆಯಬೇಕು' ಎಂದು ಹೇಳಿರುವುದು ಹೊಸದಾದ 'ರಾಜ್ಯ ಶಿಕ್ಷಣ ನೀತಿ'ಯೊಂದರ ಮೂಲಕ ಮೌಢ್ಯದ ವಿರುದ್ಧ ಒಂದಿಷ್ಟು ಹೋರಾಟವನ್ನು ಸಾಧ್ಯವಾಗಿಸಬಹುದೆಂಬ ಭರವಸೆಯನ್ನು  ಮೂಡಿಸುತ್ತದೆ. 

Sunday, August 20, 2023

'ವೇದ ಸುಳ್ಳಾದರೂ...?'

'ಗಾದೆಗೆ ಬೇಕಲ್ಲವೇ ಕಾಲನ ತಗಾದೆ' ಎಂಬ ಹೆಸರಿನಲ್ಲಿ ಯೋಗಾನಂದ ಅವರು ಬರೆದ ಲೇಖನ ವಿಚಾರಕ್ಕೆ ಹಚ್ಚುವಂತಿದೆ. ಇದನ್ನು ಓದುವಾಗ ಕೆಲ ವಾರಗಳ ಹಿಂದೆ ವಾಣಿ ಪೆರಿಯೋಡಿಯವರು 'ಪುರುಷ ಪ್ರಧಾನ ವ್ಯವಸ್ಥೆಯ ಸಮರ್ಥನೆಯ ಗಾದೆಗಳ ಬಗ್ಗೆ' ಬರೆದಿದ್ದು ನೆನಪಾಯಿತು. 

ಯಾವುದೇ ಒಂದು ಭಾಷೆಯಾಗಲಿ ಅಥವಾ ಭಾಷೆಯಲ್ಲಿ ಇರುವ ಗಾದೆಗಳಾಗಲಿ ಬರೀ ಪದಗಳಲ್ಲ. ಅದಕ್ಕೊಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ ಇರುತ್ತದೆ. ಪ್ರತಿಯೊಬ್ಬರೂ  ಪದಗಳಿಂದಲೇ ಅವರವರ ಪ್ರಪಂಚವನ್ನು ಪರಿಭಾವಿಸುವುದರಿಂದ ಭಾಷೆಯ ಮತ್ತು ಅದರ ಸಾಧ್ಯತೆಗಳ ಬಗ್ಗೆ ಸೂಕ್ಷ್ಮವಾಗಿ ಯೋಚಿಸಬೇಕಾದ ಅಗತ್ಯ ಇದೆ. 

ಬಹಳ ವರ್ಷಗಳ ಹಿಂದೆ ಲಂಕೇಶ್ ಅವರು 'ಸಾಕ್ಷಿ' ಪತ್ರಿಕೆಯಲ್ಲಿ 'ಅಸ್ವಸ್ಥತೆ - ಸಾಹಿತ್ಯ' ಎಂಬ  ತಮ್ಮ ಲೇಖನದಲ್ಲಿ ಭಾಷೆಯ ಶಕ್ತಿಯ ಬಗ್ಗೆ ಬರೆಯುತ್ತ 'ಯಾವ ಭಾಷೆಯೂ ಬಾಗಿಲಿಗೆ ಹೊಡೆದ ಮೊಳೆಯಂತೆ ಸ್ಥಿರವಲ್ಲ' ಎಂದು ಬರೆದಿದ್ದರು. ಯಾವುದೇ ಭಾಷೆಗೆ ಭೂತದ ಆಧಾರವಿರುವಂತೇ ವರ್ತಮಾನದಲ್ಲಿ ಕಾವ್ಯದ ಮತ್ತು ಕ್ರಿಯಾತ್ಮಕ ಕೆಲಸಗಳ ಅಭಿಷೇಕವಾಗದಿದ್ದರೆ ಭಾಷೆ ಸಾಯುತ್ತದೆ ಎಂದೂ ಬರೆದಿದ್ದರು. 

ಯೋಗಾನಂದ ಅವರು ಬರೆದಿರುವಂತೆ ಗಾದೆಗಳನ್ನು 'ಆಧಾರಯುಕ್ತವೂ ಸಂಕ್ಷಿಪ್ತವೂ ಆದ  ವಿವೇಕದ ಗುಳಿಗೆಗಳು' ಎಂದು ಪರಿಗಣಿಸುತ್ತಲೇ ಕೆಲವು ಗಾದೆಗಳಲ್ಲಿ ಇರುವ ಸಮಸ್ಯಾತ್ಮಕ ಅಂಶಗಳ ಪರಿಷ್ಕರಣೆ ಅಗತ್ಯವಿದೆ.  ಅವರು ಹೇಳುವಂತೆ ಇಂದು ಬಳಕೆಯಲ್ಲಿಲ್ಲದ, ವಿನಾಕಾರಣ ಒಂದು ಜಾತಿ, ಧರ್ಮ, ಪಂಥ, ಪಂಗಡ, ವರ್ಗವನ್ನು ಕೀಳಾಗಿ ಕಾಣುವಂತಹ ಪದಗಳಿದ್ದರೆ ಅವನ್ನು ನಿಘಂಟಿನಿಂದ, ಗಾದೆಗಳಿಂದ ತೆಗೆಯುವ, ಮತ್ತು ಬಳಕೆಯಿಂದ ಕೈಬಿಡುವ  ಅಗತ್ಯ ಇದೆ. ಹಾಗೆಯೇ ವಾಣಿಯವರು ಬರೆದಿರುವಂತೆ ಪುರುಷ  ಪ್ರಾಧಾನ್ಯತೆಯ ಸಮರ್ಥನೆಯ ಗಾದೆಗಳೂ ಬಳಕೆಗೆ ಯೋಗ್ಯವಾದವಲ್ಲ ಎನ್ನುವುದನ್ನು ನೆನಪಿಡಬೇಕು. 

Sunday, August 13, 2023

ಹವಾಮಾನ ಬದಲಾವಣೆ: ತಡೆಯಲು ಬೇಕಿದೆ ಜೀವನಶೈಲಿಯ ಬದಲಾವಣೆ

 ಜಾಗತಿಕ ತಾಪಮಾನದ ಹೆಚ್ಚಳ, ಹವಾಮಾನದ ಬದಲಾವಣೆ, ನೈಸರ್ಗಿಕ ವಿಕೋಪ, ಇವೆಲ್ಲ ನಾವು ಸಾಮಾನ್ಯವಾಗಿ ಸುದ್ದಿ ಶೀರ್ಷಿಕೆಗಳಾಗಿ ಓದಿ ಉದಾಸೀನ ಮಾಡುವ ಸಂಗತಿಗಳಾಗಿ ಈಗ ಉಳಿದಿಲ್ಲ. ಪರಿಣಾಮಗಳು ನಮ್ಮ ತೀರಾ ಹತ್ತಿರ ಹತ್ತಿರ ಬರುತ್ತಿವೆ. ಅಭಿವೃದ್ಧಿ ಸಂಬಂಧಿತ ನೀತಿ ನಿರ್ಧರಿಸುವ ಸರ್ಕಾರಗಳು ಮತ್ತು ನಾಯಕರು, ಹಾಗೆಯೇ ನಾಳೆಯೆಂಬುದೇ ಇಲ್ಲವೆಂಬಂತೆ ಪರಿಸರದ ನಿರ್ಲಕ್ಷ್ಯದಲ್ಲಿ ಬದುಕುತ್ತಿರುವ ಜನರೂ ಎಲ್ಲರೂ ಎಚ್ಚರಗೊಳ್ಳಲೇಬೇಕಾಗಿದೆ.  

ಹಿಮಾಚಲ ಮತ್ತು ಉತ್ತರಕಾಂಡ ಗಳ ಭೂಕುಸಿತ, ಅಸ್ಸಾಂ ಮತ್ತು ದೆಹಲಿ ಯ ಪ್ರವಾಹ ಪರಿಸ್ಥಿತಿ ತೀವ್ರತರವಾದ ಸಾವು ನೋವು, ಆಸ್ತಿ ನಷ್ಟಗಳನ್ನು ಉಂಟುಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ನಿತ್ಯದ ಸುದ್ದಿಗಳಾಗಿವೆ. ಕರ್ನಾಟಕವೂ ಆಗಿಂದಾಗ ಅತಿವೃಷ್ಟಿ ಅನಾವೃಷ್ಟಿಗಳ ಸಂಕಷ್ಟಕ್ಕೆ ಗುರಿಯಾಗುತ್ತಲೇ ಇದೆ. 

ಹಾಗೆಯೇ ಜಾಗತಿಕವಾಗಿಯೂ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ  ಹಲವಾರು ಸುದ್ದಿಗಳು ನಿತ್ಯ ವರದಿಯಾಗುತ್ತಿವೆ. ಹವಾಯಿಯ ಸುಂದರ ದ್ವೀಪದಲ್ಲಿ ಹವಾಮಾನ ಬದಲಾವಣೆಯ ಪರಿಣಾಮವಾದ ಕಾಳ್ಗಿಚ್ಚಿನಿಂದ ನಗರವೊಂದು ನಾಶವಾಗಿ ಹಲವಾರು ಮಂದಿಯ ಸಾವು, ಸಹಸ್ರಾರು ಮಂದಿಯ ಸ್ಥಳ ಪಲ್ಲಟಕ್ಕೆ ಕಾರಣವಾಗಿರುವುದು ಈಚಿನ ಸುದ್ದಿ. ಜುಲೈ ತಿಂಗಳು ಪ್ರಪಂಚದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಉಷ್ಣಾಂಶ ದಾಖಲಾದ ತಿಂಗಳೆಂದು ಯೂರೋಪಿನ ವಿಜ್ಞಾನಿಗಳು ಹೇಳಿರುವುದಾಗಿ ‘ದಿ ವೀಕ್’ ಪತ್ರಿಕೆ ವರದಿ ಮಾಡಿದೆ.   

ಅಧಿಕ ಇಂಗಾಲವು ಬಿಸಿಪ್ರಳಯಕ್ಕೆ ಕಾರಣವಾಗಿ ಮಾಡಬಹುದಾದ ಅನಾಹುತವನ್ನು ಕಲ್ಪಿಸಿಕೊಳ್ಳುವುದೂ ಭಯಾನಕ. ಕನ್ನಡದ ಶ್ರೇಷ್ಟ ವಿಜ್ಞಾನ ಸಾಹಿತಿ ನಾಗೇಶ್ ಹೆಗಡೆಯವರು ಹಿಂದೊಮ್ಮೆ ಬರೆದಿದ್ದ 'ಇಂಗಾಲಶಾಹಿಯ ಅಂತ್ಯದ ಆರಂಭ' ಎಂಬ ಲೇಖನ ನೆನಪಾಗುತ್ತದೆ. ಹಲವಾರು ವರ್ಷಗಳಿಂದ ಹೆಗಡೆಯವರು ಪರಿಸರ ವ್ಯವಸ್ಥೆಯ ಸಮರ್ಪಕ ನಿರ್ವಹಣೆಯ ತುರ್ತು ಅಗತ್ಯದ ಬಗ್ಗೆ ಲೇಖನಗಳನ್ನು ಬರೆಯುತ್ತಲೇ ಇದ್ದಾರೆ. 

ಪ್ರಕೃತಿ, ಪರಿಸರ, ಅನಿರ್ಬಂಧಿತ ಅಭಿವುದ್ಧಿಯ ಅನಾಹುತಗಳು ಇತ್ಯಾದಿಗಳ ಬಗ್ಗೆ ತಿಳಿಯಲು ಹಲವು ವರ್ಷಗಳಿಂದ ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿರುವ ಹೆಗಡೆಯವರ ವಿಜ್ಞಾನ ವಿಶೇಷ ಸರಣಿಯನ್ನು ನೋಡಬಹುದು. 

Sunday, August 6, 2023

ಮಣಿಪುರ: ಈ ಹಿಂಸೆಗೆ ಕೊನೆ ಎಂದು?

ಕಳೆದ ಮೂರು ತಿಂಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ  ಇಡೀ ದೇಶದ ಹಾಗೂ ವಿಶ್ವದ ಗಮನವನ್ನು ಸೆಳೆದಿದೆ. ಅಮರ್ತ್ಯ ಸೇನ್ ರ 'ಐಡೆಂಟಿಟಿ ಅಂಡ್ ವಯಲೆನ್ಸ್' (Identity and Violence) ಪುಸ್ತಕದ ಒಂದು ಸಾಲು ನೆನಪಿಗೆ ಬರುತ್ತದೆ. "ಭಯೋತ್ಪಾದನೆಯ ಪ್ರವೀಣ ಕುಶಲಕರ್ಮಿಗಳ ಪ್ರಭಾವದಿಂದ ಅಮಾಯಕ ಜನರಲ್ಲಿ  ತಮ್ಮ ಒಂದೇ ಗುರುತು ಮತ್ತು ಅಸ್ಮಿತೆಯನ್ನು ತೀವ್ರವಾಗಿ ಉದ್ದೀಪಿಸುವುದು ಹಿಂಸೆಗೆ ದಾರಿಯಾಗುತ್ತದೆ." ಇದು ಇತಿಹಾಸದುದ್ದಕ್ಕೂ ನಾವು ಕಂಡಿರುವ ಸತ್ಯ. 

ಸ್ವಾತಂತ್ರ್ಯ ಬಂದ ನಂತರದಲ್ಲಿ ಈಶಾನ್ಯ ರಾಜ್ಯಗಳನ್ನು ಭಾರತದೊಂದಿಗೆ ಜೋಡಿಸುವುದು ಸರಳವಾಗಿರಲಿಲ್ಲ. ಇತಿಹಾಸಕಾರ ರಾಮಚಂದ್ರ ಗುಹಾ ಅವರ  'ಇಂಡಿಯಾ ಆಫ್ಟರ್ ಗಾಂಧಿ' (India After Gandhi) ಪುಸ್ತಕದಲ್ಲಿ ಭಾಗ-೨ ರಲ್ಲಿ 'ಟ್ರೈಬಲ್ ಟ್ರಬಲ್' ಎಂಬ ಅಧ್ಯಾಯದಲ್ಲಿ ಇದರ ಮಾಹಿತಿ ಇದೆ. 

ಅಧ್ಯಾಯದ ಆರಂಭದಲ್ಲಿ ಲೇಖಕರು ಬ್ರಿಟಿಷ್ ಅಧಿಕಾರಿಯೊಬ್ಬ ನಾಗಾ ಬುಡಕಟ್ಟಿನವರ ಬಗ್ಗೆ ೧೮೪೦ರಲ್ಲಿ ಹೇಳಿರುವುದನ್ನು ಉಲ್ಲೇಖಿಸುತ್ತಾರೆ- " ಈ ಬುಡಕಟ್ಟಿನವರು ಕೆಚ್ಚಿನಿಂದ ತಮ್ಮನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ಶತ್ರುಗಳ ಮೇಲೆ ಅತ್ಯಂತ ಧೈರ್ಯದಿಂದ ಆಕ್ರಮಣ ಮಾಡುತ್ತಾರೆ. ಇವರಲ್ಲಿ ಅಪಾಯದ ಪ್ರಜ್ಞೆ ಅಥವಾ ಸಾವಿನ ಭಯಕ್ಕಿಂತ ಹೆಚ್ಚಿಗೆ ಮನಸ್ಸಿನ ದೃಢತೆ ಕಾಣುತ್ತದೆ. " ಇದು ನಾಗಾಗಳಂತೆಯೇ ಈಶಾನ್ಯದ ಇತರ ಬುಡಕಟ್ಟುಗಳಿಗೂ ಅನ್ವಯಿಸುತ್ತದೆ. ಇದಲ್ಲದೆ ಇದೇ ಅಧ್ಯಾಯದಲ್ಲಿ ಪ್ರಧಾನಿ ನೆಹರೂ ಅವರು ೧೯೫೨ ರಲ್ಲಿ ಈಶಾನ್ಯ ರಾಜ್ಯಗಳಲ್ಲಿ ಒಂದು ವಾರದ ಪ್ರವಾಸ ಕೈಗೊಂಡು ಅಲ್ಲಿನ ಜನರ ಬಗ್ಗೆ ತಿಳಿಯಲು ಪ್ರಯತ್ನಿಸಿದ್ದು, ದೇಶದ ಇತರ ಭಾಗದವರೂ ಅಲ್ಲಿನ ಜನರ ಕರಕುಶಲ ಕಲೆ ಇತ್ಯಾದಿಗಳ ಬಗ್ಗೆ ತಿಳಿಯಬೇಕಾದ ಅಗತ್ಯದ ಬಗ್ಗೆ ಬರೆದಿದ್ದು ಇತ್ಯಾದಿ ವಿವರಗಳಿವೆ. ಮತ್ತೆ ೧೯೫೫ರಲ್ಲಿ ನೆಹರೂ ಅವರು ತಮ್ಮ ಸಚಿವ ಸಂಪುಟಕ್ಕೆ ಈಶಾನ್ಯ ರಾಜ್ಯಗಳ ಬುಡಕಟ್ಟು ಪ್ರದೇಶಗಳ ಸಮಸ್ಯೆಯ ಬಗ್ಗೆ ಬರೆಯುತ್ತಾ ಅಲ್ಲಿನ ಜನರು ಭಾರತದಿಂದ ದೂರಾಗುತ್ತಿರುವ ಬಗ್ಗೆ ಹಾಗೂ ಬಲಪ್ರಯೋಗವಿಲ್ಲದೆ ಅವರನ್ನು ಇತರ ಭಾಗಗಳ ಜೊತೆ ಜೋಡಿಸುವ ಅಗತ್ಯದ ಬಗ್ಗೆ ಪ್ರಸ್ತಾಪಿಸಿದ್ದು ಸಹ ಇದೆ. 

ಆದರೂ ಈಶಾನ್ಯ ರಾಜ್ಯಗಳು ದಶಕಗಳ ಕಾಲ ಇತರ ಭಾಗಗಳಿಂದ ಪ್ರತ್ಯೇಕವಾಗಿಯೇ ಉಳಿದದ್ದು ಸತ್ಯ. ನೆಹರೂ ಅವರ ನಂತರ ಭಾರತದ ಪ್ರಧಾನಿಯೊಬ್ಬರು ಈಶಾನ್ಯ ರಾಜ್ಯಗಳಲ್ಲಿ ಒಂದು ವಾರದ ಪ್ರವಾಸ ಕೈಗೊಂಡಿದ್ದೆಂದರೆ ಎಚ್ ಡಿ ದೇವೇಗೌಡರು. ರೋಸಿ ಡಿ'ಸೋಜಾ ಅವರು ಅನುವಾದಿಸಿದ ಜೀವನ ಚರಿತ್ರೆ 'ನೇಗಿಲ ಗೆರೆಗಳು (ಎಚ್ ಡಿ ದೇವೇಗೌಡರ ಬದುಕು ಮತ್ತು ದುಡಿಮೆ)' ಪುಸ್ತಕದಲ್ಲಿ ಭಾಗ-೨ ರಲ್ಲಿ 'ಬ್ರಹ್ಮಪುತ್ರೆಯ ಹರಿವು ತಿರುವುಗಳಲ್ಲಿ' ಎಂಬ ಅಧ್ಯಾಯದಲ್ಲಿ ಈಶಾನ್ಯ ರಾಜ್ಯಗಳ ಬಗ್ಗೆ ಗೌಡರು ಹೇಳಿದ್ದು ದಾಖಲಾಗಿದೆ - 

"ಈಶಾನ್ಯ ಭಾರತದ ಪ್ರತಿಯೊಂದು ರಾಜ್ಯವು ವಿಭಿನ್ನ ಇತಿಹಾಸವನ್ನು ಹೊಂದಿದೆ. ವಿವಿಧ ಬುಡಕಟ್ಟುಗಳ ನೆಲೆಯಾಗಿರುವ ಈ ನಾಡಿನ ವೈವಿಧ್ಯತೆ ಅನನ್ಯವಾದದ್ದು. ಇವುಗಳು ಸ್ವಾತಂತ್ರಾನಂತರ ಬೇರೆ ಬೇರೆ ಕಾಲದಲ್ಲಿ ಭಾರತ ಒಕ್ಕೂಟ ವ್ಯವಸ್ಥೆಯೊಂದಿಗೆ ಸೇರಿಕೊಂಡವು. ಇಲ್ಲಿನ ಪರಿಸ್ಥಿತಿ ಅತ್ಯಂತ ಸಂಕೀರ್ಣವಾದಂತಹುದು. ನನ್ನನ್ನು ನೋಡಲು ಬಂದ ಎಲ್ಲಾ ಜನರು ಸಾಮಾನ್ಯವಾಗಿ ಹೇಳಿದ ಒಂದು ಮಾತೆಂದರೆ, “ಅವರು ಭಾರತೀಯರೇ ಆಗಿದ್ದರು ಕೂಡ ದೇಶದ ಉಳಿದ ಭಾಗದ ಜನರು ಅವರನ್ನು 'ಹೊರಗಿನವರಂತೆ ನೋಡುತ್ತಾರೆ ಮತ್ತು ಯಾರೂ ತಮ್ಮನ್ನು ನಿಜವಾಗಿ ಅರ್ಥಮಾಡಿಕೊಂಡಿಲ್ಲ,” ಎಂಬುದು. ಅವರ ಭಾಷೆ, ಸಂಸ್ಕೃತಿ, ಜನಾಂಗೀಯತೆ ಮತ್ತು ಧರ್ಮಕ್ಕೆ ಸಿಗಬೇಕಾದ ಗೌರವ ಅವರಿಗೆ ದೊರಕಿಲ್ಲ ಎಂಬ ನೋವು ಅವರನ್ನು ಕಾಡುತ್ತಿತ್ತು. "

"ಇತ್ತೀಚಿನ ವರ್ಷಗಳಲ್ಲಿ, ಇಲ್ಲಿಯ ಕೆಲವು ರಾಜ್ಯಗಳು ಹೊರಗಿನ ಜಗತ್ತಿಗೆ ತೆರೆದುಕೊಳ್ಳುವುದನ್ನು ಕಡಿಮೆ ಮಾಡಿದರೆ, ಇನ್ನು ಕೆಲವು ಉಗ್ರಗಾಮಿತ್ವ ಮತ್ತು ಭಯೋತ್ಪಾದನೆಯಿಂದ ಪೀಡಿತವಾಗಿವೆ. ಭಯೋತ್ಪಾದನೆಯ ಕಾರಣದಿಂದಾಗಿ ಹೂಡಿಕೆದಾರರು ಹಿಂಜರಿದು, ಅಭಿವೃದ್ಧಿ ಕುಂಠಿತವಾಗಿ, ನಿರುದ್ಯೋಗ ಹೆಚ್ಚಿ, ಅದು ಮತ್ತೆ ಭಯೋತ್ಪಾದನೆಗೆ ಸರಕಾಗುವ ವಿಷವರ್ತುಲದಲ್ಲಿ ಈ ರಾಜ್ಯಗಳು ಸಿಲುಕಿಕೊಂಡಿವೆ. ಇಂದು, ವಿದ್ಯಾವಂತ ನಿರುದ್ಯೋಗಿಗಳಿಗೆ ಕೆಲಸ ಕೊಡುವಂತಹ ಯಾವುದೇ ಪ್ರಮುಖ ಕೈಗಾರಿಕೆಗಳು ಅಥವಾ ಇತರ ಆರ್ಥಿಕ ಚಟುವಟಿಕೆಗಳು ಇಲ್ಲಿ ನಡೆಯುತ್ತಿಲ್ಲ. ಈ ಎಲ್ಲಾ ರಾಜ್ಯಗಳಲ್ಲಿ ಉದ್ಯೋಗಕ್ಕೆ ಇರುವ ಏಕೈಕ ಮಾರ್ಗವೆಂದರೆ ಸರ್ಕಾರಿ ಸೇವೆ. ಆದರೆ, ಸರ್ಕಾರಿ ಸೇವೆಯ ನೇಮಕಾತಿಗೂ ಒಂದು ಮಿತಿ ಇದೆ. " 

ಆರ್ಥಿಕ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಗೌಡರು ಈ ಪ್ರದೇಶವನ್ನು ಕಾಡುತ್ತಿದ್ದ ಜನಾಂಗೀಯ ಸಂಘರ್ಷವನ್ನು ಉದ್ದೇಶಿಸದೆ ಬಿಡಲಿಲ್ಲ. ತಮ್ಮ ಮಾತು ಮುಂದುವರಿಸಿ ಅವರು ಹೇಳುತ್ತಾರೆ: `ಇಲ್ಲಿನ ವಿವಿಧ ಜನಾಂಗಗಳಲ್ಲಿ  ತಮ್ಮ ಅಸ್ಮಿತೆ ಬಗ್ಗೆ ಅಭದ್ರತೆಯ ಭಾವನೆ ಕಾಡುತ್ತಿದೆ ಮತ್ತು ಕೇಂದ್ರ ಸರಕಾರ ಈ  ಪ್ರಾಂತ್ಯವನ್ನು ಮಲತಾಯಿ ಧೋರಣೆಯಿಂದ ನೋಡುತ್ತದೆ ಎಂಬ ಭಾವನೆ ಇದೆ. ಈ ಭಾವನೆಗಳನ್ನು ಸಂಪೂರ್ಣವಾಗಿ ಒಪ್ಪಬಹುದು ಅಥವಾ ಒಪ್ಪದಿರಬಹುದು. ಆದರೆ ಜನರಲ್ಲಿ ಈ ಭಾವನೆ ಇರುವುದಂತೂ ನಿಜ. ಹಾಗಾಗಿ ಜನರ ಮನಸ್ಸಿನಿಂದಈ ಭಾವನೆಯನ್ನು ತೊಡೆದುಹಾಕುವ ನಿಟ್ಟಿನಲ್ಲಿ ಒಂದು ನಿರ್ದಿಷ್ಟ ಸಮಯದ ಒಳಗೆ, ಈ  ಪ್ರದೇಶದಲ್ಲಿ ಅಗತ್ಯವಾದ ಮೂಲಸೌಕರ್ಯವನ್ನು ದೇಶದ ಉಳಿದ ಭಾಗಗಳ ಮುಚ್ಚಿ ಸರಿಸಮನಾಗಿ ಅಭಿವೃದ್ಧಿಪಡಿಸುವುದು ನಮ್ಮ ಗುರಿಯಾಗಿದೆ."

ತಮ್ಮ ಹನ್ನೊಂದೇ ತಿಂಗಳ ಅವಧಿಯಲ್ಲಿ ದೇವೇಗೌಡರು ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನಿಸಿರುವುದಕ್ಕೆ ದಾಖಲೆಗಳಿವೆ

ಮಣಿಪುರದ ವರ್ತಮಾನದ ಸಮಸ್ಯೆಯ ಮೂಲವನ್ನು ತಿಳಿಯಲು  ಇತಿಹಾಸದ ಈ ಭಾಗಗಳನ್ನು ಗಮನಿಸುವ ಅಗತ್ಯ ಇದೆ. 'ದಿ ಇಕನಾಮಿಸ್ಟ್' ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಮಣಿಪುರದ ವಿದ್ಯಮಾನಗಳನ್ನು ಹೀಗೆ ವಿವರಿಸಲಾಗಿದೆ- ಬಹುಸಂಖ್ಯಾತ ಮೈತೆಯಿಯರ ಗುಂಪು  ಅಲ್ಪಸಂಖ್ಯಾತರಾದ ಕುಕಿಯರ ಮೇಲೆ ನಡೆಸಿದ ಹಿಂಸೆ ಇದಾಗಿದೆ. ಗುಡ್ಡ ಪ್ರದೇಶದಲ್ಲಿರುವ ಕುಕಿಯರು ಬುಡಕಟ್ಟು  ವರ್ಗಕ್ಕೆ ಸೇರಿದವರಾಗಿರುವುದರಿಂದ ಹೆಚ್ಚಿನ ಸೌಲಭ್ಯ ಪಡೆಯುತ್ತಿದ್ದಾರೆಂದು ಕಣಿವೆ ಪ್ರದೇಶದಲ್ಲಿ ಅಧಿಕವಾಗಿರುವ ಮೈತೆಯಿಯರು ತಿಳಿಯುತ್ತಾರೆ.  ತಮ್ಮನ್ನೂ ರಾಜ್ಯದ ಬುಡಕಟ್ಟು ವರ್ಗಕ್ಕೆ ಸೇರಿಸುವ ಮೈತೆಯಿಯರ ಹಕ್ಕೊತ್ತಾಯವನ್ನು ಕುಕಿಯರು ವಿರೋಧಿಸುತ್ತಾರೆ. ಮೈತೆಯಿಯರನ್ನು ಬುಡಕಟ್ಟು ವರ್ಗಕ್ಕೆ ಸೇರಿಸಿದರೆ ಅವರೂ ಗುಡ್ಡಗಾಡಿನಲ್ಲಿ ನೆಲೆಸಲು ಅವಕಾಶವಾಗಿ ತಮ್ಮನ್ನು ಇನ್ನಷ್ಟು ತುಳಿಯುತ್ತಾರೆಂಬುದು ಕುಕಿಯರ ಭಯ. 

ಗುಂಪುಗಳಲ್ಲಿ ಅಸ್ಮಿತೆ ಮತ್ತು ಜೀವನೋಪಾಯಕ್ಕೆ ಸಂಬಂಧಿಸಿದ ಅಭದ್ರತೆಯಿಂದ ಆರಂಭವಾದ ಜಗಳವು  ಮಹಿಳೆಯರನ್ನು ಬೆತ್ತಲುಗೊಳಿಸಿ ಹಿಂಸಿಸುವಷ್ಟು  ಪೈಶಾಚಿಕತೆಯ ಆಯಾಮವನ್ನು ಪಡೆದದ್ದು ವೈರಲ್ ಆದ ವಿಡಿಯೋಗಳ ಮೂಲಕ ಎಲ್ಲರ ಗಮನಕ್ಕೆ ಬಂದಿದೆ. ಪತ್ರಿಕೆಗಳಲ್ಲಿ ಪ್ರತಿಕ್ರಿಯೆಗಳೂ ಬಂದಿವೆ. 

ಹಿಂಸೆಯನ್ನು ಹತ್ತಿಕ್ಕುವಲ್ಲಿ ವಿಫಲರಾಗಿರುವುದು ಮೂಲಭೂತ ಹೊಣೆಗಾರಿಕೆಯ ವೈಫಲ್ಯ ಎನ್ನುವುದು ಒಬ್ಬರ ಅಭಿಪ್ರಾಯವಾದರೆ, ಮಣಿಪುರದಲ್ಲಿನ ಈ ಅವ್ಯವಸ್ಥೆ ಉದ್ದೇಶಪೂರ್ವಕ ಸೃಷ್ಟಿ ಎಂದು ಇನ್ನೊಬ್ಬರ ಆಪಾದನೆ. 

ಎರಡು ಗುಂಪುಗಳ ನಡುವಿನ ಹಗೆತನದಲ್ಲಿ ಹಿಂಸೆಗೆ ಬಲಿಪಶುಗಳಾಗುತ್ತಿರುವ ಮಹಿಳೆಯರ ಪರಿಸ್ಥಿತಿಯ ಬಗ್ಗೆ ಮತ್ತು ದೇಶದ ಪ್ರಜ್ಞಾವಂತರು ಸರಕಾರಗಳನ್ನು ಪ್ರಶ್ನಿಸಬೇಕಾದ ಅಗತ್ಯದ ಬಗ್ಗೆ ಬರೆಯುತ್ತಾ ಮೌನವೊಂದು ಮಹಾಪಾಪ ಎಂದು ಎಚ್ಚರಿಸುವ ಹರಿತವಾದ ಲೇಖನವೂ ಇದೆ. 

ಒಟ್ಟಿನಲ್ಲಿ ಇಡೀ ದೇಶದ ದೃಷ್ಟಿ ಈಗ ಮಣಿಪುರದತ್ತ ನೆಟ್ಟಿದೆ. 

ಜಾತಿಗಣತಿ ಸಮೀಕ್ಷಾ ವರದಿ: ರಾಜಕೀಯ ಸಂಚಲನ

ಈ ತಿಂಗಳ ಆರಂಭದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರದಲ್ಲಿ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿದಾಗಿನಿಂದ ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವು ಸ್ವತಂತ್...