Sunday, September 17, 2023

ಸ್ಟ್ರೇನ್ಜ್ ಬರ್ಡನ್ಸ್ - ರಾಹುಲ್ ಗಾಂಧಿಯವರ ಪರಿಸ್ಥಿತಿ ಮತ್ತು ಅವರ ರಾಜಕೀಯ

ರಾಹುಲ್ ಗಾಂಧಿ ಕುರಿತಾದ 'Strange Burdens' (ಸ್ಟ್ರೇನ್ಜ್ ಬರ್ಡನ್ಸ್)  ಕೃತಿಯ ಬೆಂಗಳೂರು ಬಿಡುಗಡೆ ಕಾರ್ಯಕ್ರಮ ನಿನ್ನೆ ನಡೆಯಿತು. ಈ ಕಾರ್ಯಕ್ರಮದ ವರದಿ ಇಂದಿನ ಪ್ರಜಾವಾಣಿಯಲ್ಲಿದೆ. 

ಈ ಕಾರ್ಯಕ್ರಮಕ್ಕೆ ನಾನೂ ಹೋಗಿದ್ದೆ. ಮೊದಲಿಗೆ ಲೇಖಕ ಶ್ರೀನಿವಾಸರಾಜು ಅವರು ಪುಸ್ತಕದ ಕುರಿತು ತಮ್ಮ ಸಿದ್ಧಪಡಿಸಿದ್ದ ಟಿಪ್ಪಣಿಯನ್ನು ಓದಿದರು.  ನಂತರ ಸಭೆಯ ವೇದಿಕೆಯಲ್ಲಿದ್ದ ಅತಿಥಿಗಳು ಪುಸ್ತಕದ ಬಗ್ಗೆ ಮಾತನಾಡಿದರು. ಚಿಂತಕ ಪ್ರೊ ಜಿ ಎನ್ ದೇವಿ, ಮನೋಶಾಸ್ತ್ರದ ಇತಿಹಾಸ ತಜ್ಞ ಸಂಜೀವ್ ಜೈನ್, ನಟಿ ಪದ್ಮಾವತಿ ರಾವ್ ಎಲ್ಲರೂ ಪುಸ್ತಕದಲ್ಲಿ ರಾಹುಲ್ ಗಾಂಧಿಯ ಬಗೆಗೆ ಪ್ರಸ್ತಾಪವಾಗಿರುವ ಗುಣಾತ್ಮಕ ಅಂಶಗಳ ಬಗೆಗೇ ಹೆಚ್ಚು ಮಾತನಾಡಿದರು.  ಲೇಖಕರೇ ಪುಸ್ತಕದ ಪರಿಚಯದ ಅಧ್ಯಾಯದಲ್ಲಿ ಹೇಳಿರುವಂತೆ ಇದು ಮೂಲಭೂತವಾಗಿ ರಾಹುಲ್ ಗಾಂಧಿಯವರ ಸಧ್ಯದ ಪರಿಸ್ಥಿತಿ ಮತ್ತು ರಾಜಕೀಯವಾಗಿ ಅವರ ಪ್ರಸ್ತುತತೆಯ ಕುರಿತ ಒಂದು ಶೋಧನೆ. ಒಂದು ಒಳನೋಟ.

ಆಂಗ್ಲಪ್ರೇಮಿ ಉದಾರವಾದಿಗಳು ಕಾಂಗ್ರೆಸ್ಸಿನ ಹೊಸ ಸಮರ್ಥಕರಾಗಿದ್ದು, ಇವರಾಗಲಿ ರಾಹುಲ್ ಗಾಂಧಿಯವರಾಗಲಿ ಸಾಂಸ್ಕೃತಿಕ ರಾಷ್ಟ್ರವಾದವನ್ನು ಅರ್ಥ ಮಾಡಿಕೊಳ್ಳಲು ಸೋಲುವುದರ ಬಗ್ಗೆ, ಹಾಗೂ ಜನರ ಭಾಷೆಯಲ್ಲಿ ಸಂವಾದಿಸದೆ ಪಶ್ಚಿಮದ ಪ್ರಜಾಪ್ರಭುತ್ವದ ಭಾಷೆಯನ್ನು ಬಳಸುವುದು ಭಾರತಕ್ಕೆ ಹೊಂದಾಣಿಕೆಯಾಗದಿರುವ ಬಗ್ಗೆ ಪ್ರಸ್ತಾಪವಿದೆ.

ರಾಜಕೀಯದಲ್ಲಿ ಆದರ್ಶವಾದ ಮತ್ತು ಸರಳತನ ಸಾಕಾಗುವುದಿಲ್ಲವೆನ್ನುವುದನ್ನು ಹೀಗೆ ವಿವರಿಸುತ್ತಾರೆ - "ವಿನಯವಂತ, ಕರುಣಾಳು, ಉದಾರಿ, ಕ್ಷಮಾಶೀಲ, ವಿಧೇಯ, ಅಪ್ಪಟ, ಪ್ರೀತಿವಂತ, ಕಾಳಜಿವಂತ, ನೈತಿಕವಾದ ವ್ಯಕ್ತಿಯಾಗಿ ಕಾಣಿಸಿಕೊಳ್ಳಲು ರಾಹುಲ್ ಬಯಸುತ್ತಾರೆ. ಬಹುಶಃ ಅವರು ಈ ಎಲ್ಲವೂ ಆಗಿರಬಹುದು, ಆದರೆ ಈ ಯಾವ ಗುಣವೂ ಅಧಿಕಾರ ಮತ್ತು ರಾಜಕೀಯದಲ್ಲಿ ಅನ್ವಯ ಆಗುವಂತಹವಲ್ಲ"

ದೇವಿಯವರು ಮಾತನಾಡುತ್ತಾ "ರಾಹುಲ್ ಅವರಲ್ಲಿನ ಮಾನವ ಪ್ರೀತಿ, ಬಡವರ ಬಗೆಗಿನ ಕಾಳಜಿ, ಕೋಮುವಾದಕ್ಕೆ ವಿರುದ್ಧವಾದ ಜಾತ್ಯತೀತ ನಿಲುವು, ಧರ್ಮಗಳ ಮಧ್ಯೆ ಸಾಮರಸ್ಯ ಮೂಡಿಸುವ ಪ್ರಯತ್ನ, ಅಧ್ಯಾತ್ಮ, ಮಾನವೀಯತೆ, ಭಕ್ತಿಯ ನಿಲುವು, ಧಾರ್ಮಿಕ ಆಚರಣೆ" ಇವೆಲ್ಲವನ್ನೂ ಪುಸ್ತಕದಲ್ಲಿ ಚಿತ್ರಿಸಲಾಗಿದೆಯೆಂದು ಹೇಳಿದರು. 

ಪುಸ್ತಕದಲ್ಲಿ ರಾಹುಲ್ ಗಾಂಧಿಯ ರಾಜಕೀಯ ಮತ್ತು ಇಂದಿನ ಭಾರತದ ಸನ್ನಿವೇಶದಲ್ಲಿ ಅಂತಹ ರಾಜಕೀಯದ ಅತಾರ್ಕಿಕತೆ ಮತ್ತು ವಿಫಲತೆಯನ್ನು ಲೇಖಕರು ವಿವರವಾಗಿ ಚಿತ್ರಿಸಿರುವಂತೆ ನನಗೆ ಅನಿಸಿತ್ತಾದ್ದರಿಂದ ರಾಹುಲ್ ರ ಒಳ್ಳೆಯತನ ಮತ್ತು ವ್ಯಕ್ತಿಗತ ಗುಣಗಳನ್ನೇ ಕುರಿತಾದ ಭಾಷಣಗಳು ಸ್ವಲ್ಪ ಆಶ್ಚರ್ಯ ಉಂಟು ಮಾಡಿದವು. 

'ಪರಿಚಯ' ಅಧ್ಯಾಯದ ಕಡೆಯಲ್ಲಿ ಲೇಖಕರು ಕೇವಿಯಟ್ಟೊಂದನ್ನು ದಾಖಲಿಸುತ್ತಾರೆ-  “ಪುಸ್ತಕದ ಪಾತ್ರಧಾರಿಯಾಗಿ ರಾಹುಲ್ ಗಾಂಧಿಯನ್ನು ಆರಿಸಿಕೊಳ್ಳುತ್ತಿರುವುದು  ಒಂದು ರಿಸ್ಕ್. ಆದರೆ ಬರಹಗಾರರು ಮತ್ತು ಲೇಖಕರು ಅಂತಹ ರಿಸ್ಕ್ ತೆಗೆದುಕೊಳ್ಳಬೇಕು. ಕೃತಿಯ ಪ್ರಧಾನ ಪಾತ್ರಧಾರಿ ರಾಹುಲ್ ಗಾಂಧಿಯವರು ವರ್ತಮಾನದ ಮತ್ತು ಸಕ್ರಿಯವಾದ ರಾಜಕಾರಣಿಯಾಗಿದ್ದಾರೆ  ಮತ್ತು ಇನ್ನೂ ಸಂಪೂರ್ಣವಾಗಿ ಸಿದ್ಧವಾಗಿರದ ಶಿಲ್ಪವಾಗಿದ್ದು ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತಾರೆ.  ಅವರು  ಸಕ್ರಿಯವಾಗಿರುವ ಇಂದಿನ ಕಾಲಘಟ್ಟವೂ ನಿಮಿಷ ನಿಮಿಷವೂ ಬಣ್ಣ ಬದಲಾಯಿಸುವಂತಹದ್ದಾಗಿರುವುದರಿಂದ ಒಂದು ನಿರ್ದಿಷ್ಟವಾದ ವ್ಯಾಖ್ಯಾನ ಅಥವಾ ಟಿಪ್ಪಣಿಯನ್ನು ಮುಂದಿಡುವುದು ಕಷ್ಟ. ಹೀಗಿದ್ದೂ ಲೇಖಕನಾದವನು ತನ್ನ ವರ್ತಮಾನ ಕಾಲಕ್ಕೆ ಸ್ಪಂದಿಸುವುದನ್ನು ಮತ್ತು ತನ್ನ ಅನುಭವದ ಮೂಸೆಯಲ್ಲಿ ತನಗೆ ಕಾಣಿಸುವುದನ್ನು ನಮೂದಿಸುತ್ತ ಹೋಗಬೇಕೆನ್ನುವುದನ್ನು ನಿರೀಕ್ಷಿಸಲಾಗುತ್ತದೆ. ಲೇಖಕ ಭವಿಷ್ಯಕಾರನಲ್ಲವಾದ್ದರಿಂದ ರಾಹುಲ್ ಗಾಂಧಿಯ ಬಗ್ಗೆ ಅಧಿಕೃತ ಭವಿಷ್ಯವನ್ನೇನೂ ನುಡಿಯಲಾಗುವುದಿಲ್ಲ. ಮುಂದೆ ಬರಬಹುದಾದ ಕೃತಿಯೊಂದರ ಭಾಗವಾಗಿ ಅಥವಾ ಸಿದ್ಧತೆಯಾಗಿ ಇದನ್ನು ಪರಿಗಣಿಸಬಹುದು.” 

ಇಂದಿನ ಭಾರತದ ರಾಜಕೀಯ ಸಂದರ್ಭದಲ್ಲಿ ಓದಬೇಕಾದ ಪುಸ್ತಕ.  

Sunday, September 10, 2023

ಉದ್ದೀಪನ ಮದ್ದು ಸೇವನೆ - ಕ್ರೀಡಾ ಸ್ಫೂರ್ತಿಗೆ ಅಪಚಾರ

ಏಷ್ಯನ್ ಕ್ರೀಡಾಕೂಟಕ್ಕೆ ಆಯ್ಕೆಯಾದ ಈಜುಪಟು ಉದ್ದೀಪನ ಮದ್ದು ಸೇವನೆ ಮಾಡಿ ಸಿಕ್ಕಿ ಬಿದ್ದಿರುವ ವರದಿ "ಡೋಪಿಂಗ್ ಪಿಡುಗಿಗೆ ಮದ್ದು ಅರೆಯುವ ಕಾಲ" ಎಂಬ ಹೆಸರಿನಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದು ಓದಿದೆ. ಈಚಿನ ವರ್ಷಗಳಲ್ಲಿ ಕ್ರೀಡಾ ಲೋಕದಲ್ಲಿ ತಲೆದೋರಿರುವ ಅಸಮ್ಮತ ಬೆಳವಣಿಗೆಯಿದು. 

೧೯೮೮ರಲ್ಲಿ ಸಿಯೋಲ್ ಒಲಂಪಿಕ್ಸ್ ನಲ್ಲಿ ಅಮೇರಿಕಾದ  ಕಾರ್ಲ್ ಲೂಯಿಸ್ ನನ್ನ ಸೋಲಿಸಿ ಕೆನಡಾ ದ ಬೆನ್ ಜಾನ್ಸನ್ ಜಯಶಾಲಿಯಾಗಿದ್ದು, ಮತ್ತು ಮರುದಿನವೇ ಆತ ಉದ್ದೀಪನ ಮದ್ದು ಸೇವಿಸಿದ್ದನೆಂದು ಅವನನ್ನು ಅನರ್ಹಗೊಳಿಸಿದ್ದು ದೊಡ್ಡ  ಸುದ್ದಿಯಾಗಿತ್ತು. ೨೦೦೪ ರ ಅಥೆನ್ಸ್ ಒಲಂಪಿಕ್ಸ್ ಸಮಯದಲ್ಲಿ ಮದ್ದು ಸೇವನೆಗಾಗಿ  ಸುದ್ದಿಯಾಗಿದ್ದು ಅಮೇರಿಕಾದ ಅಥ್ಲೆಟ್ ಮಾರಿಯನ್ ಜೋನ್ಸ್. ಈಕೆ ೨೦೦೦ ದ ಸಿಡ್ನಿ ಒಲಂಪಿಕ್ಸ್ ನಲ್ಲಿ ಅಥ್ಲೆಟಿಕ್ಸ್ ನಲ್ಲಿ ಐದು ಪದಕ ಪಡೆದಿದ್ದವಳು. ನಂತರದಲ್ಲಿ ಈಕೆ ಮದ್ದು ಸೇವನೆಯ ತಪ್ಪೊಪ್ಪಿಕೊಂಡು ಅವಮಾನ ಅನುಭವಿಸಬೇಕಾಯಿತು.  

ಹೀಗೆ ಕ್ರೀಡೆಗಳಲ್ಲಿ ಜಯಿಸಲು ವಾಮಮಾರ್ಗ ಹಿಡಿಯುವ ಪ್ರವೃತ್ತಿ ಮುಂದುವರಿದುಕೊಂಡೇ ಬಂದಿದೆ. ವಿಶ್ವ ಉದ್ದೀಪನ ಸೇವನೆ ತಡೆ ಘಟಕ (ವಾಡಾ) ಪ್ರಕಟಿಸುವ ಉದ್ದೀಪನ ಮದ್ದು ಸೇವನೆ ಪ್ರಕರಣಗಳು ಹೆಚ್ಚು ವರದಿಯಾಗುವ  ದೇಶಗಳ ಪಟ್ಟಿಯಲ್ಲಿ ರಷ್ಯಾದ ನಂತರ ಭಾರತವೇ ಇರುವುದು ನಿಜಕ್ಕೂ ನಾಚಿಕೆಗೇಡು. ಕ್ರೀಡಾಸ್ಫೂರ್ತಿಯಿಲ್ಲದೇ ಗಳಿಸುವ ಜಯಕ್ಕೆ ಯಾವ ಬೆಲೆಯೂ ಇಲ್ಲ ಎನ್ನುವುದನ್ನು ಎಲ್ಲ ಕ್ರೀಡಾಪಟುಗಳೂ ಚಿಕ್ಕಂದಿನಲ್ಲೇ ಅರಿಯಬೇಕು.  ಜೀವನದ ಒಳ್ಳೆಯ ಮೌಲ್ಯಗಳನ್ನು ಕಲಿಯಲು ಕ್ರೀಡೆ ಒಂದು ಮಾರ್ಗ. ಅಲ್ಲಿಯೂ ಕಳ್ಳದಾರಿ ಹಿಡಿಯುವುದು ಆತ್ಮವಂಚನೆಯೇ ಸರಿ. ಕೆಲವೊಮ್ಮೆ ಅರಿವಿನ ಕೊರತೆಯಿಂದ ಅಥವಾ ಕಣ್ತಪ್ಪಿನಿಂದ ನಿಷೇಧಿತ ಔಷಧೀಯ ಸೇವನೆ ಸಂಭವಿಸಬಹುದಾದರೂ ಅಂತಹ ಸಾಧ್ಯತೆ ಅಪರೂಪ ಎಂದೇ ಹೇಳಬೇಕು.

Sunday, September 3, 2023

ವಿದ್ಯಾರ್ಥಿ ಆತ್ಮಹತ್ಯೆಗಳು

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರಗಳನ್ನು ನಡೆಸುವ ರಾಜಸ್ಥಾನದ ಕೋಟಾ ಎಂಬ ನಗರದಲ್ಲಿ ಪದೇ ಪದೇ ವಿದ್ಯಾರ್ಥಿಗಳ ಆತ್ಮಹತ್ಯೆ ವರದಿಗಳು ಬರುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿ. ಇದೇ ವಾರ "ಕೋಟಾ: ಕೊನೆಗಾಣದ ಆತ್ಮಹತ್ಯೆ" ಎಂಬ ಹೆಸರಿನಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ ಕೋಟಾ ನಗರದಲ್ಲಿ ನಡೆದಿರುವ ಆತ್ಮಹತ್ಯೆಗಳಿಗೆ ಸಂಬಂಧಿಸಿದ ಹಲವು ಅಂಕಿ-ಅಂಶ ಮತ್ತು ಮಾಹಿತಿಯನ್ನು ಒದಗಿಸುತ್ತದೆ. ಮುಖ್ಯವಾಗಿ ಯೋಚಿಸಬೇಕಾಗಿರುವುದು ವಿದ್ಯಾರ್ಥಿಗಳನ್ನು ಇಂತಹ ತೀವ್ರ ತೀರ್ಮಾನಕ್ಕೆ ದೂಡಲು ಹಿನ್ನೆಲೆಯಲ್ಲಿ ಇರುವ ವಿಚಾರಗಳ ಬಗ್ಗೆ. 

ಶೈಕ್ಷಣಿಕ ಒತ್ತಡ ದಂತೆಯೇ ಮಾನಸಿಕ ದಣಿವು, ಸಂಬಂಧಗಳಲ್ಲಿರುವ ಸಮಸ್ಯೆ, ಕುಟುಂಬದಲ್ಲಿ ಮಾನಸಿಕ ಸಮಸ್ಯೆಗಳ ಇತಿಹಾಸ ಇರುವುದು ಇವೆಲ್ಲಾ ಸಹ ಆತ್ಮಹತ್ಯೆಯಂತಹ ಕಠೋರ ನಿರ್ಧಾರಕ್ಕೆ ಕಾರಣವಾಗಿರಬಹುದು. ವಿಜ್ಞಾನಕ್ಕೆ ಸಂಬಂಧಿಸದ ಶೈಕ್ಷಣಿಕ ಕೋರ್ಸುಗಳಲ್ಲಿ ಉದ್ಯೋಗದ ಅವಕಾಶಗಳು ಕಡಿಮೆ ಎಂಬ ಕಾರಣಕ್ಕೆ ಪೋಷಕರ ಒತ್ತಡವಿಲ್ಲದಿದ್ದರೂ ಕೆಲವೊಮ್ಮೆ ವಿದ್ಯಾರ್ಥಿಗಳೇ ತಮಗೆ ಕಲಿಯುವಿಕೆ ಕಷ್ಟವಾದರೂ ಸೇರಿಕೊಂಡು ಮುಂದೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುವುದೂ ಇದೆ. ಫಲಿತಾಂಶವೊಂದೇ ಗುರಿಯಾಗಿರುವ ತರಬೇತಿ ಕೇಂದ್ರಗಳು ಅತ್ಯಂತ ಕಠಿಣ ತರಬೇತಿ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವುದರಿಂದ ಕೆಲ ವಿದ್ಯಾರ್ಥಿಗಳು ಹೊಂದಿಕೊಳ್ಳಲೂ ಆಗದ, ಹೊರಬರಲೂ ಆಗದ ಸ್ಥಿತಿಗೆ ಸಿಲುಕಿಕೊಳ್ಳುತ್ತಾರೆ. ಆಗ ಅವರ ಪೋಷಕರು ಅವರ  ಸಹಾಯಕ್ಕೆ ನಿಲ್ಲಬೇಕಾದದ್ದು ಅತ್ಯಗತ್ಯ . ನಿಜ, ಆದರೆ ಕೆಲವೊಮ್ಮೆ ಪೋಷಕರನ್ನು ನಿರಾಸೆಗೊಳಿಸಬಾರದೆಂಬ ಹಿಂಜರಿಕೆಯೋ , ಅಥವಾ ಇನ್ನಷ್ಟು ಪ್ರಯತ್ನದಿಂದ ಮುಂದಿನ ಸಲ ಯಶಸ್ವಿಯಾಗುವೆನೆಂಬ ಆಶಾಭಾವನೆಯಿಂದಲೋ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯಕ್ಕೆ ಮೀರಿದ ಚಕ್ರವ್ಯೂಹದಲ್ಲಿ ಸಿಲುಕುತ್ತಾರೆ. ಪರೀಕ್ಷೆಯಲ್ಲಿನ ಅಂಕಗಳಷ್ಟೇ ಸಾಮರ್ಥ್ಯದ ಮಾನದಂಡವಾದಾಗ  ಅಭ್ಯರ್ಥಿಯಲ್ಲಿರಬಹುದಾದ ಇತರ ಸಾಮರ್ಥ್ಯಗಳೆಲ್ಲ ಗೌಣವಾಗಿ ವಿಫಲತೆಯ ಹಣೆಪಟ್ಟಿ ಅಂಟಿಕೊಳ್ಳುತ್ತದೆ. ಭಾವನೆಗಳು ತೀವ್ರವಾಗಿರುವ ಹದಿಹರಯದ ವಯಸ್ಸೂ ತಕ್ಷಣದ ತೀರ್ಮಾನಗಳಿಗೆ ಅನಾಹುತಗಳಿಗೆ ಕಾರಣವಾಗುತ್ತದೆ. 

ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳನ್ನು ತಯಾರು ಮಾಡುವ ತರಬೇತಿ ಸಂಸ್ಥೆಗಳ ಬಗ್ಗೆ "ಖೋಟಾ ಕಾರ್ಖಾನೆಗಳಿಗೆ ಬಲಿಯಾಗುತ್ತಿರುವ ವಿದ್ಯಾರ್ಥಿಗಳು" ಎಂಬ ಹೆಸರಿನ ಲೇಖನವನ್ನು ವಾರ್ತಾಭಾರತಿ ಯಲ್ಲಿ ನೋಡಿದೆ. ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಜೀವನದ ಬಗ್ಗೆ, ಅನೇಕ ರೀತಿಯ ಉದ್ಯೋಗಗಳ ಬಗ್ಗೆ, ಪರಿಶ್ರಮ ಮತ್ತು ಸಾಧನೆಗಳ ಬಗ್ಗೆ, ಸೋಲು-ಗೆಲುವುಗಳ ಅನಿವಾರ್ಯತೆಯ ಬಗ್ಗೆ,  ಆರೋಗ್ಯಕರ ಹವ್ಯಾಸಗಳ ಬಗ್ಗೆ ಚಿಕ್ಕಂದಿನಿಂದಲೇ ಅರಿವು ಮೂಡಿಸುವುದು ಹೆಚ್ಚು ಪ್ರಯೋಜನವಾಗಬಹುದು. ಟ್ಯೂಷನ್ ಸೆಂಟರ್ ಗಳನ್ನೇ ಮುಚ್ಚಿಸಿಬಿಡಬೇಕು ಎನ್ನುವುದು 'ಎತ್ತು ಈಯಿತು ಎಂದರೆ ಕೊಟ್ಟಿಗೆಯಲ್ಲಿ ಕಟ್ಟು' ಎಂದಂತೆ ಆಗಬಹುದು. 

ಜಾತಿಗಣತಿ ಸಮೀಕ್ಷಾ ವರದಿ: ರಾಜಕೀಯ ಸಂಚಲನ

ಈ ತಿಂಗಳ ಆರಂಭದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರದಲ್ಲಿ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿದಾಗಿನಿಂದ ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವು ಸ್ವತಂತ್...