Sunday, October 29, 2023

ಜಾತಿಗಣತಿ ಸಮೀಕ್ಷಾ ವರದಿ: ರಾಜಕೀಯ ಸಂಚಲನ

ಈ ತಿಂಗಳ ಆರಂಭದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರದಲ್ಲಿ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿದಾಗಿನಿಂದ ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವು ಸ್ವತಂತ್ರ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.  ಈ ವಿಷಯಕ್ಕೆ ಸಂಬಂಧಪಟ್ಟಂತೆ ಲೇಖನಗಳು ಪ್ರಕಟವಾಗಿವೆ. ಪ್ರಜಾವಾಣಿಯಲ್ಲಿ "ಶ್ರೇಷ್ಠತೆಯ ವ್ಯಸನಕ್ಕೆ ಜಾತಿಗಣನೆ ಮದ್ದು" ಎಂಬ ಲೇಖನ ಪ್ರಕಟವಾಗಿತ್ತು. ಶ್ರೇಷ್ಠತೆಯ ವ್ಯಸನಕ್ಕೆ ಜಾತಿ "ಗಣನೆ" ಹೇಗೆ ಮದ್ದಾಗುತ್ತದೋ ಗೊತ್ತಿಲ್ಲ. ಆದರೆ ಅದರಲ್ಲಿ ಲೇಖಕರು ಬರೆದಿರುವಂತೆ "ಅಲಕ್ಷಿತ ಸಮುದಾಯಗಳ ಜನರನ್ನು ಕಾಲಾಳುಗಳನ್ನಾಗಿ ಬಳಸಿಕೊಂಡು ರಾಜಕಾರಣ ಮಾಡುತ್ತಿರುವ ಪ್ರಬಲ ಜಾತಿಗಳ ಹಿತಾಸಕ್ತಿಗೆ ಹೊಡೆತ ಬೀಳಲಿದೆ" ಎಂಬುದನ್ನು ಒಪ್ಪಬಹುದು. 

ಬಿಹಾರದ ಜಾತಿಗಣತಿ ವರದಿಯಲ್ಲಿ OBC ವರ್ಗಕ್ಕೆ ಸೇರಿದವರ ಸಂಖ್ಯೆ ಶೇ ೬೩ ರಷ್ಟು ಎಂದು ತಿಳಿದು ಬಂದಿದೆ. ಈ ವರ್ಗದ ಮೀಸಲಾತಿ ಶೇ ೨೭ ಇರುವುದರಿಂದ ಈಗಿರುವ ಮೀಸಲಾತಿಯಲ್ಲಿ ಪರಿಮಾಣದ ನಿರ್ಧಾರ ಅಸಮಂಜಸವಾಗಿ ಇದೆ ಎಂಬ  ಭಾವನೆ ಬರುವುದು ಸಹಜ. ಅಲ್ಲದೆ ಜಾತಿಗಣತಿಯ ಜೊತೆಗೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಜಾತಿವಾರು ಅಂಕಿ ಅಂಶದ ವರದಿಯ ಬಿಡುಗಡೆಗೆ ಒತ್ತಾಯ ಕೇಳಿ ಬರುತ್ತಿದೆ. ಅದಕ್ಕೆ ವಿರೋಧ ಪಕ್ಷಗಳ ಬೆಂಬಲವೂ ವ್ಯಾಪಕವಾಗಿ ವ್ಯಕ್ತವಾಗುತ್ತಲಿದೆ. ಈ ಬಗೆಯ ವಿಸ್ತೃತ ಸಮೀಕ್ಷೆಗಳಿಗೆ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯಿಂದ ಪ್ರೋತ್ಸಾಹ ಕಂಡು ಬಂದಿಲ್ಲ. ಪ್ರಜಾವಾಣಿಯ ಲೇಖನದಲ್ಲಿ "ಪ್ರಧಾನಿಯವರು ಜಾತಿಗಣತಿ ವರದಿ ಬಿಡುಗಡೆಯಾದ ಬಳಿಕ, ಅದನ್ನು ಉಲ್ಲೇಖಿಸದೆ, ವಿರೋಧ ಪಕ್ಷಗಳು ದೇಶವನ್ನು ಜಾತಿ ಆಧಾರದ ಮೇಲೆ ವಿಭಜಿಸಿವೆ" ಎಂದು  ಹೇಳಿರುವ ಬಗ್ಗೆ ಪ್ರಸ್ತಾಪ ಇದೆ. ಈ ಹಿಂದೆ ಬಿಹಾರ ಸರ್ಕಾರದ  ಜಾತಿಗಣತಿ ಕುರಿತು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಲ್ಲಿ ಅಫಿಡವಿಟ್ ಸಲ್ಲಿಸಿದ್ದನ್ನೂ ನೆನಪಿಸಿಕೊಳ್ಳಬಹುದು.  

ಕೆಲವು ವರ್ಷಗಳ ಹಿಂದೆ How the BJP Wins ಎಂಬ ಪುಸ್ತಕ ಬಂದಿತ್ತು. ಅದರಲ್ಲಿ Social Engineering ಎಂಬ ಒಂದು ಅಧ್ಯಾಯದಲ್ಲಿ ೨೦೧೭ ರ ಉತ್ತರ ಪ್ರದೇಶ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಅಳವಡಿಸಿಕೊಂಡಿದ್ದ ತಂತ್ರಗಾರಿಕೆಯ ಬಗ್ಗೆ ಬರೆದಿದ್ದರು. ಜಾತಿಯಾಧಾರಿತ ರಾಜಕೀಯದ ವಿವರಣೆ ಅಂಕಿ ಅಂಶಗಳೊಂದಿಗೆ ವಿವರಿಸಿದ್ದರು. ಬಿಜೆಪಿಯ ಭೂಪಿಂದರ್ ಯಾದವ್ ಅವರು ಈ ಪುಸ್ತಕದ ಲೇಖಕರಿಗೆ ವಿವರಿಸಿದಂತೆ ಅಮಿತ್ ಷಾ ರೂಪಿಸಿದ '೬೦ ಪರ್ಸೆಂಟ್' ಫಾರ್ಮುಲವು ಪಕ್ಷದ ಯಶಸ್ಸಿಗೆ ಕಾರಣವಾಗಿತ್ತು. ೨೦ ಪರ್ಸೆಂಟ್ ಮುಸ್ಲಿಮರು, ೧೦ ಪರ್ಸೆಂಟ್ ಯಾದವರು ಮತ್ತು ೧೦ ಪರ್ಸೆಂಟ್ ಜಾಟವ(ದಲಿತ)ರು ಈ ಮೂರು ಗುಂಪಿನವರನ್ನು ಹೊರಗಿಟ್ಟು ಉಳಿದ ೬೦ ಪರ್ಸೆಂಟ್ ಜನರನ್ನು ತಮ್ಮ ಮತ ಬೇಟೆಗೆ ಗುರಿಯಾಗಿಸುವುದು ಅವರ ತಂತ್ರವಾಗಿತ್ತು. 

ಸುನಿಲ್ ಬನ್ಸಲ್ ೨೦೧೪ ರಲ್ಲಿ ಉತ್ತರ ಪ್ರದೇಶ ಬಿಜೆಪಿಯ  ಸಾಂಸ್ಥಿಕ ಪ್ರಧಾನ ಕಾಯದರ್ಶಿಯಾಗಿ ಆಯೋಜನೆಗೊಂಡಾಗ ಇಡೀ ಬಿಜೆಪಿ ರಾಜ್ಯ ಘಟಕದ ಸರ್ವೇಕ್ಷಣೆ ಮಾಡಿಸುತ್ತಾರೆ. ಅದರಲ್ಲಿ ತಿಳಿದು ಬರುವುದೇನೆಂದರೆ ಇಡೀ ರಾಜ್ಯದಲ್ಲಿ ಎಲ್ಲ ಮಟ್ಟದಲ್ಲಿ ಪಕ್ಷದ ಹುದ್ದೆಗಳಲ್ಲಿದ್ದವರಲ್ಲಿ OBC ವರ್ಗದವರು ಶೇ ೭ ಮತ್ತು ದಲಿತರು ಶೇ ೩ ಮಾತ್ರ. ಅಲ್ಲಿಂದ ಆರಂಭಿಸಿ ಮುಂದಿನ ಎರಡು ವರ್ಷಗಳಲ್ಲಿ ಈ ಎರಡು ವರ್ಗಗಳ ಪ್ರಾತಿನಿಧ್ಯವನ್ನು ಶೇ ೩೦ಕ್ಕೆ ಏರಿಸಲಾಗುತ್ತದೆ. ರಾಜ್ಯದಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಗೂ OBC ಗುಂಪಿಗೆ ಸೇರಿದ ಕೇಶವ ಪ್ರಸಾದ್ ಮೌರ್ಯ ಅವರನ್ನು ಆಯ್ಕೆ ಮಾಡಲಾಗುತ್ತದೆ. 

ಮುಂದೆ ೨೦೧೭ರ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ  ಪಕ್ಷ ಪ್ರಚಂಡ ಬಹುಮತದಿಂದ ಆರಿಸಿ ಬರುತ್ತದೆ. ಪ್ರಬಲ ಜಾತಿಗಳ ಪಕ್ಷವೆಂದು ಗುರುತಿಸಿಕೊಂಡಿದ್ದರೂ ಅಲಕ್ಷಿತ ಸಮುದಾಯಗಳ ಜನರ ಮತಗಳನ್ನು ಸೆಳೆಯಲು ಪಕ್ಷಕ್ಕೆ ನೆರವಾಗಿದ್ದು ಜಾತಿ ಸಮೀಕರಣವೇ ಆಗಿತ್ತು.  

ಬಿಹಾರದ ಜಾತಿ ಗಣತಿ ವರದಿಯು "ಅಂಚಿನಲ್ಲಿರುವ ಅತಿ ಸಣ್ಣ ಸಮೂಹಗಳ ಮೇಲೆ ಬೆಳಕು ಚೆಲ್ಲುವ" ಜೊತೆಗೆ "ಮೀಸಲಾತಿಯಲ್ಲಿ ಶೇ ೫೦ ರ ಮೇಲ್ಮಿತಿ" ಯಂತಹ ವಿಚಾರಗಳನ್ನು ಚರ್ಚೆಗೆ ತಂದಿದೆ. ಹಿಂದಿನ ಚುನಾವಣೆಗಳಲ್ಲಿ OBC ಮತಗಳನ್ನು  ಗಣನೀಯವಾಗಿ ಗಳಿಸಿರುವ ಬಿಜೆಪಿ ಗೆ ಜಾತಿ ಗಣತಿಯ ಕುರಿತು ಏಕೆ ಭಯ ಎಂಬ ಪ್ರಶ್ನೆಗಳು ಏಳುತ್ತಿವೆ.  ಜಾತಿ ಗಣತಿಯ ವರದಿಯು ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಲು ಕಾರಣಗಳಿವೆ.  ಮುಖ್ಯವಾಗಿ, ಸಾಮಾಜಿಕ ನ್ಯಾಯ ದ ದೃಷ್ಟಿಯಿಂದ ಅಪ್ರಿಯ ಸತ್ಯಗಳನ್ನು ಎಲ್ಲ ವರ್ಗಗಳವರೂ ಮನಗಾಣಲೇಬೇಕಾದ ಕಾಲ ಬಂದಿದೆ. ಅದರಲ್ಲೇ ಎಲ್ಲರ ಹಿತವೂ ಇದೆ. ಇದನ್ನು ಕೋಮುವಾದದ ವಿರುದ್ಧ ವಿರೋಧ ಪಕ್ಷದವರು ಹುಟ್ಟು ಹಾಕುತ್ತಿರುವ ಜಾತಿವಾದ ಎಂದು ಕಾಣುವುದು ಸಿನಿಕತನವಾಗುತ್ತದೆ. ಇವೆರಡೂ ವಾದಿಗಳಿಗೂ ಅವರ ನಂಬಿಕೆ ಅಭಿಪ್ರಾಯಗಳಿಗೆ ಅವರದೇ ಸಮರ್ಥನೆಗಳಿರಬಹುದು. ನಮ್ಮದೇ ಸಿದ್ಧಾಂತಗಳಿಗೆ ಗಟ್ಟಿಯಾಗಿ ಜೋತು ಬೀಳುವುದರಿಂದ ಯಾವ ಸಮಸ್ಯೆಗೂ ಪರಿಹಾರ ಸಿಗಲಾರದು. ಹಾಗೆಯೇ ಯಾವುದೇ ಐತಿಹಾಸಿಕ ಸಮಸ್ಯೆಗೆ ಇಂದಿನ ತಲೆಮಾರಿನವರನ್ನು ಸಂಪೂರ್ಣ ಹೊಣೆಗಾರರನ್ನಾಗಿಸಿ ಪರಿಹಾರ ಹುಡುಕುವುದೂ ಅರ್ಥಹೀನ. ಇಲ್ಲೇ ನಮಗೆ ಪ್ರೌಢ ಮತ್ತು ವಿವೇಕವಂತ ರಾಜಕೀಯ ನಾಯಕರ ಅಗತ್ಯ ಅತ್ಯಂತ ಜರೂರಿನ ವಿಚಾರವಾಗಿರುವುದು.

ಕರ್ನಾಟಕದಲ್ಲೂ ಜಾತಿ ಗಣತಿಯ ವರದಿಯನ್ನು ಬಿಡುಗಡೆ ಮಾಡಲೆಂಬ ಅಭಿಪ್ರಾಯ, ಹಾಗೆಯೇ  ಇಂತಹ ಗಣತಿಗೆ ಸ್ವಾಗತ ಸೂಚಿಸುವ ಲೇಖನಗಳು ಪತ್ರಿಕೆಗಳಲ್ಲಿ ಬರುತ್ತಿವೆ. ಶಿವಸುಂದರ್ ಅವರು ವಾರ್ತಾ ಭಾರತಿಯಲ್ಲಿ ಭಾಗ ೧ಭಾಗ ೨, ಮತ್ತು ಭಾಗ ೩ ವಿಸ್ತೃತವಾಗಿ ಬರೆದಿದ್ದಾರೆ.

Sunday, October 15, 2023

ಇಸ್ರೇಲ್‌-ಪ್ಯಾಲೆಸ್ಟೈನ್: ನಿಲ್ಲದ ಹಿಂಸೆ

ಕಳೆದ ವಾರವಿಡೀ ಸುದ್ದಿಯಲ್ಲಿದ್ದು ಇನ್ನೂ ಸಹ ಯಾವುದೇ ತಾರ್ಕಿಕ ಅಂತ್ಯದ ಸಾಧ್ಯತೆ ಕಾಣಿಸುತ್ತಿಲ್ಲದ ಇಸ್ರೇಲ್‌-ಪ್ಯಾಲೆಸ್ಟೈನ್ ಬಿಕ್ಕಟ್ಟು ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಸುಧೀಂದ್ರ ಬುಧ್ಯ ಅವರು ಪ್ರಜಾವಾಣಿಯಲ್ಲಿ ಬರೆದ “ಇಸ್ರೇಲ್ ಯುದ್ಧ ಅನಿರೀಕ್ಷಿತವೇ?” ಎಂಬ ಲೇಖನವು ಸಧ್ಯದ ಈ ಘರ್ಷಣೆಯ ಹಿನ್ನೆಲೆಯ ಹಲವು ವಿವರಗಳನ್ನು ಒದಗಿಸುತ್ತದೆ.

ಜಗತ್ತಿನ ಹಲವು ರಾಜಕೀಯ ಸಮಸ್ಯೆಗಳಂತೆಯೇ ಇಸ್ರೇಲ್‌-ಪ್ಯಾಲೆಸ್ಟೈನ್ ಸಮಸ್ಯೆಗೂ ಒಂದು ಐತಿಹಾಸಿಕ ಹಿನ್ನೆಲೆಯಿದ್ದು, ಎಲ್ಲ ಸಮಸ್ಯೆಗಳಿಗಿರುವಂತೇ ಈ ಸಮಸ್ಯೆಗೂ ಹಲವು ಮುಖಗಳಿವೆ. ಇದನ್ನು ಕೇವಲ ಒಂದು ಭಯೋತ್ಪಾದನೆಯ ಘಟನೆಯಾಗಿ ಮತ್ತದರ ವಿರುದ್ಧದ ಸಮರವಾಗಿ ನೋಡಲು ಸಾಧ್ಯವಿಲ್ಲ.

ಬಹಳಷ್ಟು ಸಮಯ ನಾವು ಒಂದು ಗುಂಪಿನ ದೃಷ್ಟಿಕೋನದಿಂದಲೇ ಐತಿಹಾಸಿಕವಾದ, ದಶಕಗಳ, ಶತಮಾನಗಳ ಕಾಲದಿಂದ ಪರಿಹಾರವಾಗದೇ ಉಳಿದಿರುವ ಸಮಸ್ಯೆಗಳನ್ನು ನೋಡುತ್ತಿರುತ್ತೇವೆ. ಮತ್ತು ಶಕ್ತಿವಂತ ಗುಂಪುಗಳ ಹಿಡಿತದಲ್ಲಿರುವ ಮಾಧ್ಯಮಗಳು ಸಹ ಒಂದು ವಸ್ತುನಿಷ್ಟ ಅಭಿಪ್ರಾಯವನ್ನು ರೂಪಿಸಿಕೊಳ್ಳಲು ನೆರವಾಗುವುದಿಲ್ಲ. ಹೀಗಾಗೆ ಸಮಸ್ಯೆಯ ವಿವಿಧ ಮುಖಗಳನ್ನು ಗ್ರಹಿಸಲು ನಮ್ಮ ಆಕರಗಳೂ ಭಿನ್ನವಾಗಿರಬೇಕಾಗುತ್ತದೆ. ಕೇವಲ ಪತ್ರಾಗಾರಗಳೂ, ಪತ್ರಿಕಾವರದಿಗಳೂ ಸಹ ಸಮಸ್ಯೆಯ ಎಲ್ಲ ಮಗ್ಗಲುಗಳನ್ನು ಎಲ್ಲ ಕಾಲದಲ್ಲೂ ನೀಡಲು ಸಾಧ್ಯವಾಗದೆ ಇರಬಹುದು. ಬಹಳಷ್ಟು ಸಮಯ ಸಾಹಿತ್ಯ ಸಹ ನಮ್ಮ ಸುತ್ತಲ ಪ್ರಪಂಚವನ್ನು ನೋಡಲು ಮತ್ತು ಗ್ರಹಿಸಲು ಅತ್ಯಂತ ಸಹಕಾರಿ.

ಇಸ್ರೇಲ್ ವಿಷಯದಲ್ಲೂ ಅಷ್ಟೇ. ವಿಲಿಯಂ ಶೈರರ್ ಬರೆದ “ದಿ ರೈಸ್ ಅಂಡ್ ಫಾಲ್ ಆಫ್ ದಿ ಥರ್ಡ್ ರೈಕ್” ಕೃತಿಯು ಜರ್ಮನ್ ನಾಝಿಗಳಿಂದ ಯಹೂದಿಗಳು ಅನುಭವಿಸುವ ಸಂಕಟವನ್ನು ತೆರೆದಿಡುತ್ತದೆ. ಹಾಗೆಯೇ “ಸೋಫಿ’ಸ್ ಚಾಯ್ಸ್”ನಂತಹ ಜನಪ್ರಿಯ ಕಾದಂಬರಿಗಳು ಸಹ. ಇಂತಹ ಯಹೂದಿಗಳಿಗೆ ತಮ್ಮದೇ ಆದ ಒಂದು ತಾಯ್ನಾಡನ್ನು ಸೃಷ್ಟಿಸಿ ಕೊಡಲು ವಿಶ್ವದ ಶಕ್ತಿಯುತ ರಾಷ್ಟ್ರಗಳು ಪ್ರಯತ್ನಿಸಿದ್ದು ಆ ನಂತರದಲ್ಲಿ ಇಸ್ರೇಲಿಗರು ಅಲ್ಲಿನ ಮೂಲ ನಿವಾಸಿಗಳಾಗಿದ್ದ ಪ್ಯಾಲೆಸ್ಟೈನಿಯರನ್ನು ಮೂಲೆಗುಂಪಾಗಿಸಿ ತಮ್ಮ ನೆಲೆಗಟ್ಟನ್ನು ವಿಸ್ತರಿಸಿದ್ದು ಸಾಹಿತ್ಯ ಕೃತಿಗಳಲ್ಲಿ ಓದುವಾಗ ಹಲವು ಮಾನವಿಕ ಅಂಶಗಳನ್ನು ತೆರೆದಿಡುತ್ತದೆ. ತಿರಸ್ಕಾರ, ಅಪಮಾನ, ಪೂರ್ವಾಗ್ರಹಗಳನ್ನು ಖುದ್ದಾಗೆ ಅನುಭವಿಸಿದ್ದ ಇಸ್ರೇಲಿಯರು ನಂತರದಲ್ಲಿ ಪ್ಯಾಲೆಸ್ಟೈನಿಯರ ಕುರಿತು ಅಷ್ಟೇ ಅಸಹಿಷ್ಣುಗಳಾಗುವುದನ್ನು ಇತಿಹಾಸದ ವ್ಯಂಗ್ಯ ಎನ್ನಬೇಕೋ ವಿಪರ್ಯಾಸ ಎನ್ನಬೇಕೋ.

ಇಸ್ರೇಲ್ ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ ಪಶ್ಚಿಮ ಏಶಿಯಾದಲ್ಲಿ ಘಟಿಸಿರುವ ವಿದ್ಯಮಾನಗಳ ಹಿನ್ನೆಲೆಯಲ್ಲೂ ಹಲವು ಕೃತಿಗಳು ಬಂದಿವೆ. “ಮೈನರ್ ಡೀಟೇಲ್” ಎಂಬ ಕಾದಂಬರಿಯು 1948 ರ ಯುದ್ಧದಲ್ಲಿ ಸುಮಾರು ಏಳು ಲಕ್ಷ ಪ್ಯಾಲೆಸ್ಟೈನಿಯನ್ನರು ತಮ್ಮ ಮನೆಗಳನ್ನು ತೊರೆಯಬೇಕಾದ ಸಂದರ್ಭದ ಹಿನ್ನೆಲೆ ಹೊಂದಿದೆ. ಹಾಗೆ್ಯೇ, ಅರಬ್ ರಾಷ್ಟ್ರೀಯತೆ, ಇಸ್ಲಾಮಿಕ್ ಭಯೋತ್ಪಾದನೆ, ಇಸ್ರೇಲ್-ಪ್ಯಾಲೆಸ್ಟೈನ್ ಮಧ್ಯದ ದ್ವೇಷ ಉಲ್ಬಣಿಸಲು ಮೂಲವಾದ 1967ರ ಯುದ್ಧದ ಬಗ್ಗೆ “ದಿ ಸಿಕ್ಸ್ ಡೇ ವಾರ್” ಎಂಬ ಕಾದಂಬರಿಯಲ್ಲಿ ಓದಬಹುದು.

ಮತ್ತೊಂದು ಮುಖ್ಯವಾಗಿ ಗಮನಿಸಬೇಕಾದ ವಿಚಾರವೆಂದರೆ, ವಿಷಮ ಪರಿಸ್ಥಿತಿಗಳು ತಲೆದೋರಿದಾಗ ಸಮಾಧಾನದ ಪರಿಹಾರಗಳಿಗೆ ಪ್ರಯತ್ನಿಸದೆ ಜನರಲ್ಲಿ ಇನ್ನಷ್ಟು ದ್ವೇಷವನ್ನು ಬಿತ್ತಿ ಹಿಂಸೆಗೆ ಪ್ರಚೋದಿಸುವ ನಾಯಕರುಗಳು. ಇಂತಹವರು ಸೃಷ್ಟಿಸುವ ಅವಾಂತರಗಳಿಗೆ ಇತಿಹಾಸವೇ ಸಾಕ್ಷಿ. ತಮ್ಮ ಅಧಿಕಾರದ ಆಕಾಂಕ್ಷೆಗಾಗಿ ಸಾರ್ವಜನಿಕ ಸಂಸ್ಥೆಗಳನ್ನು ಹಾಳುಗೆಡವಿ, ಬಹುತ್ವ, ಸಾರ್ವಜನಿಕ ಸಂವಾದ, ಆಳವಾದ ವಿಚಾರ, ಇತರರ ಹಕ್ಕುಗಳ ಗೌರವ ಎಲ್ಲವನ್ನೂ ಬದಿಗೊತ್ತಿ ಸಮಸ್ಯೆಗಳನ್ನು ಉಲ್ಬಣಿಸುವ ಇಂತಹವರ ಬಗ್ಗೆ ಎಚ್ಚರ ಅಗತ್ಯ. ಈಗ ಇಸ್ರೇಲ್ನಲ್ಲಿ ಸಹ. ಇದಕ್ಕಾಗಿ ವಿಶ್ವದ ಪ್ರಭಾವಿ ದೇಶಗಳ ಮಧ್ಯಪ್ರವೇಶ ಅಗತ್ಯವಾಗುತ್ತದೆ. ಇಂತಹ ಮಧ್ಯಪ್ರವೇಶ ಸಹ ಅಗತ್ಯ ಸಂದರ್ಭಗಳಲ್ಲಿ, ಅಗತ್ಯವಿದ್ದಷ್ಟು ಮಾತ್ರ ಇರಬೇಕಾಗುತ್ತದೆ.

ಜಾತಿಗಣತಿ ಸಮೀಕ್ಷಾ ವರದಿ: ರಾಜಕೀಯ ಸಂಚಲನ

ಈ ತಿಂಗಳ ಆರಂಭದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರದಲ್ಲಿ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿದಾಗಿನಿಂದ ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವು ಸ್ವತಂತ್...